ನವದೆಹಲಿ: ಇನ್ನು ಮುಂದೆ ಹಣ ಪಾವತಿಸಿದ ಬಳಿಕವೇ ಮೃತ ದೇಹವನ್ನು ನೀಡುತ್ತೇವೆ ಅಥವಾ ರೋಗಿಯನ್ನು ಡಿಸ್ಚಾರ್ಜ್ ಮಾಡುತ್ತೇವೆ ಎಂದು ಆಸ್ಪತ್ರೆಯವರು ಪಟ್ಟು ಹಿಡಿದರೆ ಅದು ಅಪರಾಧವಾಗುತ್ತದೆ.
ಹೌದು. ಆಸ್ಪತ್ರೆಗಳು ಹಣಕ್ಕಾಗಿ ರೋಗಿಯ ಕುಟುಂಬದ ಸದಸ್ಯರಿಗೆ ಪೀಡಿಸುತ್ತಿವೆ ಎನ್ನುವ ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೋಗಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಕರಡು ನೀತಿಯನ್ನು ಬಿಡುಗಡೆ ಮಾಡಿದೆ.
ಕರಡು ನೀತಿಯ ಅನ್ವಯ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಅಥವಾ ಮೃತ ಕುಟುಂಬದವರು ಹಣ ಪಾವತಿ ಮಾಡಲಿಲ್ಲವೆಂದು ಅವರನ್ನು ಆಸ್ಪತ್ರೆಯಲ್ಲಿ ಒತ್ತೆಯಾಳುಗಳಂತೆ ಅಲ್ಲಿಯೇ ಇಟ್ಟುಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 28 ಪುಟಗಳಿರುವ ಕರಡು ನೀತಿಯನ್ನು ತಯಾರಿಸಿದ್ದು, ಆರೋಗ್ಯ ಸಚಿವಾಲಯ ವೆಬ್ಸೈಟ್ನಲ್ಲಿ ಕರಡು ನೀತಿಯನ್ನು ಪ್ರಕಟಿಸಿದೆ. ಸಾರ್ವಜನಿಕರು ಈ ಕರಡನ್ನು ಓದಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಾರ್ವಜನಿಕರಿಂದ ಅಭಿಪ್ರಾಯ, ಸಲಹೆಗಳನ್ನು ಪಡೆದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ನೀತಿಯನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಲಿದೆ.
ಕರಡಿನಲ್ಲಿ ಏನಿದೆ?
ರೋಗಿಗೆ ಯಾವುದೇ ರೀತಿಯ ಕುಂದು-ಕೊರತೆಯಾಗಿದ್ದರೆ ಅಥವಾ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ 15 ದಿನಗಳ ಒಳಗಾಗಿ ಲಿಖಿತ ದೂರು ನೀಡಬಹುದು. ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಇರುವ ಪ್ರತಿಯನ್ನು (ಕೇಸ್ ಪೆಪರ್ ಗಳನ್ನು) ರೋಗಿಯ ಸಂಬಂಧಿಕರಿಗೆ 24 ಗಂಟೆಯ ಒಳಗಾಗಿ ನೀಡಬೇಕು. ಜೊತೆಗೆ ಆಸ್ಪತ್ರೆಯಿಂದ ಮನೆಗೆ ಮರಳಿದ 72 ಗಂಟೆಯ ಒಳಗಾಗಿ ಮಾಹಿತಿ ಪತ್ರ ನೀಡಬೇಕು.
ರೋಗಿಗಳ ವೈಯಕ್ತಿಕ ಜೀವನಕ್ಕೆ ದಕ್ಕೆ ತರುವಂತಹ ಯಾವುದೇ ಮಾಹಿತಿಯನ್ನು ವೈದ್ಯರು ನೀಡಬಾರದು. ಹಣ ಪಾವತಿಸುವಾಗ ರೋಗಿಯ ಕುಟುಂಬದವರು ವಿವರವಾದ ಬಿಲ್ ಕೇಳಿದರೆ ನೀಡಬೇಕು. ಚಿಕಿತ್ಸೆಗೆ ಸಂಬಂಧಿಸಿದಂತೆ ಪಾವತಿ ಮಾಡಿದ ಹಣದ ಮಾಹಿತಿಯನ್ನ ಕೇಳಿದಾಗ ಯಾವುದೇ ರೀತಿಯ ಶುಲ್ಕ ಪಡೆಯದೆ ಮಾಹಿತಿ ನೀಡಬೇಕು.
ಆಸ್ಪತ್ರೆಯ ಒಂದು ಭಾಗದಲ್ಲಿ ಸೌಲಭ್ಯಗಳಿಗೆ ನಿಗದಿಯಾದ ಬೆಲೆಯ ಪಟ್ಟಿಯನ್ನು ಹಾಕಬೇಕು. ಅಷ್ಟೇ ಅಲ್ಲದೇ ಯಾವ ಚಿಕಿತ್ಸೆಗೆ ಎಷ್ಟು ಶುಲ್ಕ ಎನ್ನುವ ವಿವರ ಇರುವ ಕರಪತ್ರ ಗಳನ್ನು ನೀಡಬೇಕು. ಈ ಮಾಹಿತಿಗಳು ಇಂಗ್ಲಿಷ್ ಅಥವಾ ಆಯಾ ಪ್ರಾದೇಶಿಕ ಭಾಷೆಯಲ್ಲಿ ರೋಗಿಗಳಿಗೆ ಅರ್ಥವಾಗುವಂತೆ ಇರಬೇಕು. ಲಿಂಗ, ಜಾತಿ, ಭಾಷೆ ಸೇರಿದಂತೆ ಯಾವುದೇ ತಾರತಮ್ಯವಿಲ್ಲದೆ ಚಿಕಿತ್ಸೆ ನೀಡಬೇಕು. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಒಬ್ಬ ಎಚ್ಐವಿ ರೋಗಿಯನ್ನು ಕಡೆಗಣಿಸುವಂತಿಲ್ಲ.
ಹೊಸ ಆರೋಗ್ಯ ನೀತಿಯನ್ನು ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ: PatientCharterforcomments
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv