ತುಮಕೂರು: ಪೂಜ್ಯರಾದ ಉದ್ದಾನ ಶಿವಯೋಗಿ ಶ್ರೀಗಳ ಜಾತ್ಯಾತೀತ ನೀತಿ ಶ್ರೀಮಠದ ಬೆಳವಣಿಗೆಯ ಶಕ್ತಿಮೂಲ ಎಂದು ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ.
ತನ್ನ 110ನೇ ಹುಟ್ಟು ಹಬ್ಬದ ಪ್ರಯುಕ್ತ ಭಕ್ತರನ್ನು ಉದ್ದೇಶಿಸಿ ಮತಾನಾಡುವ ವೇಳೆ ಅವರು ತಮ್ಮ ಗುರುಗಳನ್ನು ಪ್ರಥಮವಾಗಿ ನೆನಪಿಸಿಕೊಂಡು ನಂತರ ಮಾತನ್ನು ಆಡಲು ಆರಂಭಿಸಿದರು.
ಪೂಜ್ಯ ಗುರುಗಳಾದ ಉದ್ದಾನ ಸ್ವಾಮಿಗಳ ಕಾಲದಲ್ಲಿಯೇ(1917) ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಸನಿವಾಸ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸಲಾಯ್ತು. ಪೂಜ್ಯರು ಎಲ್ಲಾ ಜಾತಿ ಮತ ಪಂಥದ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟು ಶ್ರೀಮಠದ ಜಾತ್ಯಾತೀತ ನೀತಿಗೆ ಭದ್ರ ತಳಹದಿಯನ್ನು ಹಾಕಿದರು. ಅದರ ಫಲವಾಗಿ ಇಂದು ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀ ಮಠದ ಜಾತ್ಯಾತೀತ ನೀತಿ ಶ್ರೀಮಠದ ಬೆಳವಣಿಗೆಯ ಶಕ್ತಿಮೂಲ ಅಂತಾ ಶ್ರೀಗಳು ಹೇಳಿದರು.
ಕೃಷಿಕರ ಕಷ್ಟಕ್ಕೆ ಸ್ಪಂದಿಸಿ: ಶತಮಾನಗಳ ಕಾಲ ಪರಕೀಯರ ಆಡಳಿತದಲ್ಲಿದ್ದ ನಮ್ಮ ದೇಶ ಸ್ವಾತಂತ್ರ್ಯ ಪಡೆದು 70 ವರ್ಷವಾಗಿವೆ. ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಚುನಾವಣೆಯಲ್ಲಿ ಗೆದ್ದ ಪಾರ್ಟಿಯವರು ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯಗಳು ಚುನಾವಣೆ ಆಸೆ, ಆಮಿಷಗಳಿಗೆ ಒಳಗಾಗದೆ, ಒಳ್ಳೆಯವರನ್ನು ಚುನಾಯಿಸುವುದು ಎಲ್ಲರ ಕರ್ತವ್ಯ. ಚುನಾವಣೆ ನಂತರ ಸರ್ಕಾರಗಳು ರಚನೆಗೊಂಡು ಆಡಳಿತ ಯಂತ್ರಗಳು ಚಾಲನೆಗೊಳ್ಳುತ್ತವೆ. ಆಡಳಿತ ಯಂತ್ರಗಳನ್ನು ನಡೆಸುವ ಅಧಿಕಾರಿ ವರ್ಗ ಸೃಷ್ಟಿಯಾಗುತ್ತದೆ. ದೇಶದ ಸುಮಾರು 133 ಕೋಟಿ ಅದರಲ್ಲಿ ಶೇ 65 ಹಳ್ಳಿಗರು. ಇಲ್ಲಿನ ಬಹುತೇಕ ಕೃಷಿಕರು ಕಷ್ಟದಲ್ಲಿದ್ದಾರೆ. ಅವರ ಕಷ್ಟ ಕಾರ್ಪಣ್ಯಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಅಧಿಕಾರಿ ವರ್ಗ ಲಂಚರಹಿತವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ಉದ್ಯೋಗಿಗಳಾಗಬೇಕು. ಸಂಪತ್ತು ಉತ್ಪತ್ತಿಯಾಗಬೇಕು. ಸಂಪತ್ತಿನ ಒಂದು ಭಾಗ ಸ್ವಂತಕ್ಕೆ ಬಳಸಬೇಕು. ಇದರಿಂದ ಸಂಪತ್ತು ಒಂದು ಕಡೆ ಶೇಖರಣೆಯಾಗುವುದು ತಪ್ಪುತ್ತದೆ. ಉಳಿದ ಸಂಪತ್ತನ್ನು ದಾಸೋಹಕ್ಕೆ ಬಳಸಬೇಕು ಅಂದ್ರು.
ಇದನ್ನೂ ಓದಿ: ನಡೆದಾಡೋ ದೇವರಿಗೆ 110ನೇ ಜನ್ಮದಿನ- ಪ್ರಧಾನಿ ಮೋದಿ ಶುಭಾಶಯ