ಬೆಂಗಳೂರು: ಇಂದು ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರ 90ನೇ ಜಯಂತಿಯಾಗಿದ್ದು, ಅಣ್ಣಾವ್ರ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತ ಸರ್ಕಾರದಿಂದ ಕೂಡ ಹುಟ್ಟುಹಬ್ಬ ಆಚರಿಸುತ್ತಿದ್ದು, ಅಂಬರೀಶ್ ಹಾಗೂ ವಿಷ್ಣು ಅಭಿಮಾನಿಗಳು ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ರಾಜ್ ಅಭಿಮಾನಿಗಳು ನೇತ್ರದಾನದ ಬಗ್ಗೆ ಅರಿವು ಮೂಡಿಸುತ್ತಾ ವಿಶೆಷ್ಠ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಸಡಗರ ಸಂಭ್ರಮದಿಂದ ತಮ್ಮ ನೆಚ್ಚಿನ ನಟ ಹಾಗೂ ಅಭಿಮಾನಿಗಳು ಆರಾಧ್ಯ ದೈವವೆಂದು ಪೂಜಿಸುವ ರಾಜ್ಕುಮಾರ್ ಅವರ 90ನೇ ವರ್ಷದ ಜಯಂತಿಯನ್ನು ಆಚರಿಸಲಾಗುತ್ತಿದೆ.
ಡಾ. ರಾಜ್ ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯ.
ನಾಳೆ ಅವರ ಹುಟ್ಟುಹಬ್ಬ.
ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ರಾಜಣ್ಣ ಅವರ ಹುಟ್ಟು ಹಬ್ಬ ಆಚರಿಸುತ್ತಿದೆ.
ಎಲ್ಲರೂ ಭಾಗವಹಿಸಿ.
ಡಾ ರಾಜ್ ಹುಟ್ಟುಹಬ್ಬದ ಶುಭಾಶಯಗಳು#Rajkumar pic.twitter.com/FhnCvkpReB
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 23, 2019
ಡಾ. ರಾಜ್ಕುಮಾರ್ ಹುಟ್ಟುಹಬ್ಬವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುವ ಬಗ್ಗೆ ಸಿಎಂ ನಿರ್ಧಾರದ ಬೆನ್ನಲ್ಲೆ ವಿಷ್ಣು ಹಾಗೂ ಅಂಬಿ ಅಭಿಮಾನಿಗಳು ಸಿಎಂಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಡಾ ರಾಜ್ ಹುಟ್ಟುಹಬ್ಬದಂತೆ ಕನ್ನಡ ಚಿತ್ರರಂಗದ ದಿಗ್ಗಜರಾಗಿರುವ ಡಾ ವಿಷ್ಣು, ಅಂಬಿ ಹುಟ್ಟುಹಬ್ಬವನ್ನು ಆಚರಿಸುತ್ತೀರಾ ಎಂದು ಸವಾಲೆಸೆದಿದ್ದಾರೆ.
ರಾಜ್ ಹುಟ್ಟುಹಬ್ಬದ ನಿರ್ಧಾರ ಸ್ವಾಗತ. ಅವರಂತೆ ಕನ್ನಡ ಚಿತ್ರರಂಗದ ದಿಗ್ಗಜರ ಸಾಲಲ್ಲಿ ಡಾ. ವಿಷ್ಣುವರ್ಧನ್, ಅಂಬರೀಶ್ ಇದ್ದಾರೆ. ಅವರ ಹುಟ್ಟುಹಬ್ಬವನ್ನು ಆಚರಿಸದೇ ತಾರತಮ್ಯ ಮಾಡೋದು ಸರಿಯಲ್ಲ. ಚಿತ್ರರಂಗದ ದಿಗ್ಗಜರ ವಿಚಾರದಲ್ಲಿ ತಾರತಮ್ಯ ಮಾಡಬೇಡಿ. ಒಬ್ಬರ ಹುಟ್ಟುಹಬ್ಬವನ್ನು ಆಚರಿಸಿ, ಇನ್ನೊಬ್ಬರನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ಹಾಗೆಯೇ ಸರ್ಕಾರ ಈ ಸಮಯದಲ್ಲಾದರೂ ವಿಷ್ಣು ಸ್ಮಾರಕದ ಬಗ್ಗೆ ಮಾತಾನಾಡಲೇಬೇಕು. ರಾಜಕೀಯ ದಾಳವನ್ನಾಗಿ ಡಾ. ರಾಜ್ ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ಮನವಿ ಮಾಡಿದ್ದಾರೆ.