ಚೆನ್ನೈ: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆದು 9 ದಿನಗಳು ಆಗಿದ್ದು, ನಿಧಾನವಾಗಿ ಗಾಯ ವಾಸಿಯಾಗುತ್ತಿದೆ. ಆದರೆ ಅವರಿಗೆ ನ್ಯೂಟ್ರಿಷನ್ ಕೊರತೆ ಇರುವುದರಿಂದ ಐಸಿಯೂನಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ವೈದ್ಯ ಡಾ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯರು, ಶ್ರೀಗಳ ಆರೋಗ್ಯ ಉತ್ತಮವಾಗಿದೆ. ಶಸ್ತ್ರ ಚಿಕಿತ್ಸೆಯಿಂದ ಆಗಿರುವ ಗಾಯ ವಾಸಿಯಾಗುತ್ತಿದೆ. ಶ್ರೀಗಳಿಗೆ ನ್ಯೂಟ್ರಿಷನ್ ಕೊರತೆ ಇದೆ. ಈ ಕುರಿತು ಹೆಚ್ಚಿನ ಗಮನ ನೀಡಲಾಗುತ್ತಿದೆ. ಅಲ್ಲದೇ ಫಿಸಿಯೋಥೆರಪಿ ಚಿಕಿತ್ಸೆಯ ಅಗತ್ಯವಿದ್ದು, ಸದ್ಯ ಶ್ರೀಗಳಿಗೆ ವಾಕ್ ಕೂಡ ಮಾಡಿಸಲಾಗುತ್ತಿದೆ. ಅವರಿಗೆ ಯಾವುದೇ ಬೇಯಿಸಿದ ಆಹಾರ ನೀಡದೆ ವೈದ್ಯರ ಸೂಚನೆ ಮೇರೆಗೆ ನ್ಯೂಟ್ರಿಷನ್ ನೀಡಲಾಗುತ್ತಿದೆ. ಶ್ರೀಗಳು ಆತ್ಮಲಿಂಗ ಪೂಜೆಯನ್ನು ಮಾಡುತ್ತಿದ್ದು, ಬಹುಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಸೂಚನೆಯಂತೆ ಚಿಕಿತ್ಸೆ ಹಾಗೂ ಆಹಾರವನ್ನು ನೀಡಲಾಗುತ್ತಿದೆ ಎಂದರು.
ಇಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಳಿಕ ಮಾತನಾಡಿದ ಅವರು, ಶ್ರೀಗಳು ಆರೋಗ್ಯವಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗುತ್ತಾರೆ. ನನ್ನನ್ನು ಗುರುತು ಹಚ್ಚಿ ಮಾತನಾಡಿಸಿದ್ದಾರೆ. ಯಾವಾಗ ಬಂದಿದ್ದು, ಪ್ರಸಾದ ಸ್ವೀಕರಿಸಿದೆಯಾ ಎಂದು ವಿಚಾರಿಸಿದರು ಎಂದು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv