ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಬೆಳಗ್ಗಿಗಿಂತ ಈಗ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದ್ದು, ಯಾರೂ ಕೂಡ ಮಠದತ್ತ ಬರಬೇಡಿ ಎಂದು ವೈದ್ಯ ಪರಮೇಶ್ ಅವರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಆರೋಗ್ಯ ಸರಿಯಿಲ್ಲ ಎಂದು ಮಾಧ್ಯಮದ ಮೂಲಕ ತಿಳಿದುಕೊಂಡು ಎಲ್ಲರೂ ಬಂದು ಇಲ್ಲಿ ಇದ್ದುಕೊಂಡು ಅನಾನುಕೂಲ ಮಾಡಿಕೊಳ್ಳಬಾರದು. ಯಾಕಂದ್ರೆ ಇದರಿಂದ ಮಠದ ವ್ಯವಸ್ಥೆಗೂ ಅನಾನುಕೂಲವಾಗುತ್ತದೆ. ಹೀಗಾಗಿ ದಯವಿಟ್ಟು ಯಾರೂ ಮಠಕ್ಕೆ ಬಂದು ಶ್ರೀಗಳ ದರ್ಶನಕ್ಕಾಗಿ ಕಾಯಬೇಡಿ. ಮಠಕ್ಕೆ ದಯಮಾಡಿ ಯಾರೂ ಬರಬೇಡಿ. ಅಂತಹ ಏನಾದ್ರೂ ತೊಂದರೆಗಳಿದ್ದರೆ ನಾವೇ ಮಾಧ್ಯಮದ ಮುಖಾಂತರ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸ್ವಾಮೀಜಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತಿದ್ದೇವೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಬಿಜಿಎಸ್ ಹಾಗೂ ಕೆಲ ತಜ್ಞ ವೈದ್ಯರನ್ನು ಬರಲು ಹೇಳಿದ್ದೇವೆ. ಈ ಮೂಲಕ ಚಿಕಿತ್ಸೆಗೆ ಸಲಹೆ ಕೊಡುವಂತೆ ಕೇಳಿಕೊಂಡಿದ್ದೇವೆ. ಹೀಗಾಗಿ ಅವರು ಶ್ರೀಘ್ರವೇ ತುಮಕೂರಿಗೆ ಬರಲಿದ್ದಾರೆ. ಇದಕ್ಕಾಗಿ ಸ್ವಲ್ಪ ಸಮಯ ಬೇಕು. ಸ್ವಾಮೀಜಿಗಳ ಆರೋಗ್ಯ ಗಂಭೀರವಾಗಿದ್ದರೂ ನಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದ್ರೆ ಸದ್ಯಕ್ಕೆ ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ. ಅಂತಹ ಏನಾದ್ರೂ ತೊಂದರೆಗಳಾದರೆ ಚಿಕಿತ್ಸೆಯಲ್ಲಿ ಸರಿಯಾಗಿಲ್ಲ ಅಥವಾ ಸಮಸ್ಯೆಗಳಾದ್ರೆ ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿಸುತ್ತೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv