ಬೆಂಗಳೂರು: ಕೆಲವರಿಗೆ ಕೈ ತುಂಬ ಹಣ ಬರ್ತಿದ್ದರೂ ಅದನ್ನ ಬದಿಗೆ ಸರಿಸಿ ಸಮಾಜಕ್ಕೆ, ರೈತ ಸಮುದಾಯಕ್ಕೆ ಒಳಿತು ಮಾಡ್ಬೇಕು ಅನ್ನೋ ಹಂಬಲ ಜಾಸ್ತಿ ಇರತ್ತೆ. ಅಂತಹವರಲ್ಲಿ ಇಂದಿನ ನಮ್ಮ ಪಬ್ಲಿಕ್ ಹೀರೋ ನೆಲಮಂಗಲದ ಡಾ. ನಾಗರಾಜಯ್ಯ ಕೂಡ ಒಬ್ಬರು.
ಇಳಿವಯಸ್ಸಿನಲ್ಲೂ ದಿಟ್ಟ ನಿರ್ಧಾರದಿಂದ ಯಶಸ್ವಿಯಾಗಿರೋ ಡಾ. ನಾಗರಾಜಯ್ಯ ನೆಲಮಂಗಲದ ಕೂಲಿಪುರ ನಿವಾಸಿ. ಬಡ ರೈತ ಕುಟುಂಬದಲ್ಲಿ ಜನಿಸಿದ ನಾಗರಾಜಯ್ಯ, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಪ್ರತಿಷ್ಟಿತ ಹೆಚ್ಎಂಟಿ ಕಾರ್ಖಾನೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು.
ಡೆಪ್ಯೂಟಿ ಮ್ಯಾನೇಜರ್ ಆಗಿ ಬಡ್ತಿ ಸಿಕ್ಕಿ, ಕೈತುಂಬ ಸಂಬಳವೂ ಬರುತ್ತಿತ್ತು. ಆದರೂ ಜಮೀನಿನಲ್ಲಿ ತಂದೆಯ ಕಷ್ಟ ನೋಡಿ ಇದಕ್ಕೆ ಪರಿಹಾರವನ್ನಾಗಿ ಕೆಲಸಕ್ಕೆ ಗುಡ್ಬೈ ಹೇಳಿ ತಾನೇ ಸಂಶೋಧನೆ ಮಾಡಿದ್ರು. ಆಗ ಮೂಡಿದ್ದೇ ನೋಡಿ ಕೃಷಿ ಪರಿಕರ. ಒಂದೇ ಯಂತ್ರವನ್ನ ಹತ್ತಾರು ಉದ್ದೇಶಕ್ಕೆ ಬಳಸುವಂತಹ ಯತ್ನದಲ್ಲಿ ಯಶಸ್ವಿಯೂ ಆಗಿದ್ದಾರೆ.
ರಾಜ್ಯದಲ್ಲಿ ಸಿಗೋ ಬಿಡಿ ಭಾಗಗಳನ್ನೇ ಬಳಸಿಕೊಂಡು ಮನೆ ಆವರಣದಲ್ಲೇ ಪುಟ್ಟ ಕಾರ್ಖಾನೆಯಲ್ಲಿ `ಪವರ್ ವೀಡರ್’ ಅನ್ನೋ ಮಿನಿ ಟ್ರ್ಯಾಕ್ಟರ್ ತಯಾರಿಸಿದ್ದಾರೆ. ಟ್ರ್ಯಾಕ್ಟರ್, ಟಿಲ್ಲರ್ ರೆಡಿಮಾಡಿ ಉಳುಮೆ, ಬೆಳೆನಾಟಿ, ಕುಂಟೆ, ಕಳೆ ತೆಗೆಯೋದು, ಔಷಧಿ ಸಿಂಪಡಿಸೋದು, ಬಾವಿಯಿಂದ ನೀರು ಎತ್ತೋದು ಹೀಗೆ ನಾನಾ ಪ್ರಯೋಜನಕ್ಕೆ ಬರೋ ಯಂತ್ರಗಳನ್ನ ತಯಾರಿಸಿದ್ದಾರೆ. ಈ ಯಂತ್ರಗಳನ್ನ ಕಡಿಮೆ ವೆಚ್ಚದಲ್ಲಿ ರೈತರಿಗೆ ಕೊಡುತ್ತಿದ್ದಾರೆ.
ನಾಗರಾಜಯ್ಯ ಅವರ ಈ ಶ್ರಮಕ್ಕೆ ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ಇಂಡಿಯನ್ ವರ್ಚುಯಲ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
https://www.youtube.com/watch?v=cRjr9Oljq8o