ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ ಸುಧಾಕರ್ (Dr. K Sudhakar) ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ರೆ ಒಂದು ತಿಂಗಳೊಳಗೆ ಜೈಲು ಸೇರುತ್ತಾರೆ ಎಂದು ಮಾಜಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಹೇಳಿದ್ದಾರೆ.
ಸುಧಾಕರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಅನ್ನೋ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ಮೇಷ್ಟ್ರು ಮಗ ಅಂತ ಹೇಳಿಕೊಂಡು ಭ್ರಷ್ಟಾಚಾರದ ಮೂಲಕ ಇಂದು ಸಾವಿರಾರು ಕೋಟಿಯ ಒಡೆಯನಾಗಿದ್ದಾನೆ. ಹಾಗಾಗಿ ಬಿಜೆಪಿಯವರೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ರೆ ಇಡಿ ಹಾಗೂ ಐಡಿ ರೇಡ್ ಮಾಡಿಸಿ ಜೈಲಿಗೆ ಹಾಕಿಸ್ತಾರೆ ಅಂತ ಟಾಂಗ್ ನೀಡಿದರು.
ಸುಧಾಕರ್ ಅವಶ್ಯಕತೆ ಕಾಂಗ್ರೆಸ್ ಗೆ ಇಲ್ಲ. ಪಕ್ಷದ್ರೋಹ ಮೋಸ ಮಾಡಿರುವ ಸುಧಾಕರ್ ನ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಸೇರಿಸಿಕೊಳ್ಳೋದು ಬೇಡ. ಒಂದು ವೇಳೆ ಸೇರಿಸಿಕೊಂಡರೆ ತೀವ್ರ ವಿರೋಧ ಮಾಡುತ್ತೇವೆ ಅಂತ ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ರೆ ಬಾಂಬ್ ಸ್ಫೋಟ ಆಗ್ತಿರಲಿಲ್ಲ: ಗೋವಾ ಸಿಎಂ ಪ್ರಮೋದ್ ಸಾವಂತ್
ನಾನು ಕಾಂಗ್ರೆಸ್ ಬಿಡೋದಿಲ್ಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗದೆ ಹೋದರೆ ಪಕ್ಷ ಬಿಡುವ ಎಚ್ಚರಿಕೆ ನೀಡಿದ್ದ ಮಾಜಿ ಸಚಿವ ಎನ್ ಎಚ್ ಶಿವಶಂಕರರೆಡ್ಡಿ (N.H Shivashankar Reddy) ಯೂಟರ್ನ್ ಹೊಡೆದಿದ್ದಾರೆ. ಟಿಕೆಟ್ ವಿಚಾರವಾಗಿ ನನಗೆ ಮಣೆ ಹಾಕಲಿಲ್ಲ, ನಮ್ಮ ಹಿರಿಯ ನಾಯಕರು ಗಾಢನಿದ್ದೆಗೆ ಜಾರಿದ್ರು. ಹಾಗಾಗಿ ಕಾಲು ಚುಚ್ಚುವ ಶಾಕ್ ಟ್ರೀಟ್ ಮೆಂಟ್ ಕೊಟ್ಟೆ, ಆಗ ನನ್ನ ಕರೆಸಿ ಮಾತನಾಡಿದ್ರು. ಈಗ ನನ್ನ ಹೆಸರು ಸಹ ಎಐಸಿಸಿ ಗೆ ಕಳುಹಿಸಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸವಿದೆ. ಸಿಗದಿದ್ರೂ ಪಕ್ಷದಲ್ಲಿ ಇರ್ತೇನೆ ಅಂತ ಹೇಳಿದರು.