ಕೆಲವರು ಉದ್ದೇಶಪೂರ್ವಕವಾಗಿ ಮಕ್ಕಳೊಂದಿಗೆ ಪೋಷಕರನ್ನು ಹಾದಿ ತಪ್ಪಿಸಿದ್ದರು: ಸುಧಾಕರ್

Public TV
2 Min Read
SUDHAKAR 4

-ಮಕ್ಕಳು ಶಿಕ್ಷಣದ ಕಡೆ ಹೆಚ್ಚು ಗಮನ ನೀಡಲಿ

ಬೆಂಗಳೂರು: ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯದ ಬಗ್ಗೆ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ. ಕೆಲವರು ಮಕ್ಕಳೊಂದಿಗೆ ಪೋಷಕರನ್ನು ಉದ್ದೇಶಪೂರ್ವಕವಾಗಿ ಹಾದಿ ತಪ್ಪಿಸಿದ್ದರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

HIJAB 2 4

ಹಿಜಬ್‌ ಕುರಿತಾಗಿ ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳು ಶಾಲೆಗಳಲ್ಲಿ ಶಿಕ್ಷಣದ ಕಡೆ ಗಮನ ನೀಡಬೇಕು. ಶಿಕ್ಷಣದಿಂದ ಆರೋಗ್ಯಯುತ ಸಮಾಜದ ನಿರ್ಮಾಣ ಸಾಧ್ಯ. ದೇಶದ ಅಭಿವೃದ್ಧಿಯಲ್ಲೂ ಶಿಕ್ಷಣದ ಪಾತ್ರ ಬಹಳ ದೊಡ್ಡದಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

HIGHCOURT

ಶಾಲೆಗಳು ದೇಗುಲಗಳಿಗೆ ಸಮಾನ. ಇಲ್ಲಿ ಜಾತಿ, ಮತ ಮತ್ತು ಧರ್ಮದ ಭೇದವಿಲ್ಲ. ಸಮವಸ್ತ್ರ ಅನ್ನುವುದು ಏಕತೆ ಮತ್ತು ಸಮಾನತೆಯನ್ನು ಬಿಂಬಿಸಲು ಇರುವ ಸಣ್ಣ ಮಾರ್ಗ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದರ ಜೊತೆಗೆ ಕಲಿಕೆ ಬಗ್ಗೆ ಗಮನಕೊಡಬೇಕು. ವೈಜ್ಞಾನಿಕ ದೃಷ್ಟಿಕೋನ ಇಟ್ಟುಕೊಂಡು ಮಕ್ಕಳು ಶಾಲೆಯಲ್ಲಿ ಅನ್ಯೋನ್ಯ ಭಾವನೆಯಿಂದ ಶಿಕ್ಷಣ ಪಡೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ಹಿಜಬ್‌ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಹೈಕೋರ್ಟ್‌ ಹೇಳಿದ್ದೇನು?

ಶಾಲೆಗಳಲ್ಲಿ ಶಿಕ್ಷಣ ಹೊರತುಪಡಿಸಿ ಬೇರೆ ವಿಷಯಗಳಿಗೆ ಆದ್ಯತೆ ನೀಡಬಾರದು. ಧಾರ್ಮಿಕ ವಿಚಾರದಲ್ಲಿ ಯಾರೋ ಕೆಲವರು ಉದ್ದೇಶಪೂರ್ವಕವಾಗಿ ಮಕ್ಕಳು ಹಾಗೂ ಪೋಷಕರ ಹಾದಿ ತಪ್ಪಿಸಿದ್ದರು. ಸಮಾಜದ ಶಾಂತಿ ಕದಡಲು ಇಂತಹ ಕೃತ್ಯಗಳಿಗೆ ಇಳಿಯುವುದು ಸರಿಯಲ್ಲ ಎಂದರು.

ಉಡುಪಿಯಲ್ಲಿ ಆರಂಭವಾದ ಹಿಜಬ್ ವಿವಾದ ಬೇರೆ ಬೇರೆ ಕಾರಣಗಳಿಂದ ಅಂತರಾಷ್ಟ್ರೀಯ ಸುದ್ದಿಯಾಯಿತು. ಕೆಲ ರಾಜಕೀಯ ಪಕ್ಷಗಳು ಹಿಜಬ್ ಗಲಾಟೆಗೆ ಕುಮ್ಮಕ್ಕು ನೀಡಿದವು. ರಾಜಕೀಯ ಪಕ್ಷಗಳ ಆಟಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಸಮಾನ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿ ಕಡೆ ಎಲ್ಲರೂ ಗಮನ ಕೊಡಬೇಕು. ಹೈಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಿ ಅದನ್ನು ಪಾಲಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು. ಪೋಷಕರು ಕೂಡ ಮಕ್ಕಳ ವಿಚಾರ ಬಂದಾಗ ಯಾವುದೇ ವಿವಾದಕ್ಕೆ ಬೆಲೆ ಕೊಡದೆ ಮಕ್ಕಳ ಭವಿಷ್ಯವನ್ನು ಕಾಪಾಡಲು ಒತ್ತು ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *