ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರೇ ನಿಮಗೆ ಹೃದಯ ಮನಸ್ಸು ಇದ್ಯಾ? ನಿಮಗೆ ತಾಕತ್ ಇದ್ದರೆ ನಮ್ಮ ಮೇಲೆ ಹಗೆತನ ಸಾಧಿಸುವುದಲ್ಲ. ನಿಮ್ಮನ್ನು ಮುಗಿಸೋದವರು ಬೇರೆ ಇದ್ದಾರೆ. ತಾಕತ್ ಇದ್ದರೆ ಅವರ ಮೇಲೆ ಹಗೆತನ ಸಾಧಿಸಿ ಎಂದು ಮಾಜಿ ಸಿಎಂಗೆ ಅನರ್ಹ ಶಾಸಕ ಸುಧಾಕರ್ ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಮಾತನಾಡಿದ ಸುಧಾಕರ್, ತಂದೆ ಸ್ಥಾನದಲ್ಲಿ ಇದ್ದ ನೀವು ಎಲ್ಲರನ್ನು ಸಮಾನಾಗಿ ಕಾಣಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಬೀಳಲು ಸ್ವತಃ ನೀವೇ ಕಾರಣ ಹೊರತು ನಾವಲ್ಲ. ಹೀಗಾಗಿ ನಮ್ಮ ಮೇಲೆ ಹಗೆತನ ಸಾಧನೆ ಮಾಡುವುದಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಅಂದಿನ ಸಿಎಂ ಎಚ್ಡಿಕೆ ನನಗೆ ಕೆಲಸಗಳನ್ನ ಮಾಡಿಕೊಡುತ್ತೇನೆ ಎಂದರೂ ಕೆಲ ಕಾಂಗ್ರೆಸ್ ನಾಯಕರೇ ಅಡ್ಡಿ ಮಾಡಿದರು. ಅವರ ಮೇಲೆ ಏನು ಕ್ರಮ ಕೈಗೊಂಡಿರಿ ಸಿದ್ದರಾಮಯ್ಯನವರೇ? ಪಕ್ಷದ ನಾಯಕತ್ವವನ್ನ ವಹಿಸಿಕೊಂಡು ತಂದೆಯ ಸ್ಥಾನದಲ್ಲಿದ್ದವರೂ ಎಲ್ಲರೂ ಒಂದೇ ಅಂತ ಕಾಣಬೇಕಿತ್ತು. ಆದರೆ ನೀವು ಅದರಲ್ಲಿ ವಿಫಲ ಅಗಿದ್ದಕ್ಕೆ ಸಮ್ಮಿಶ್ರ ಸರ್ಕಾರ ಬಿತ್ತು. ಹೀಗಾಗಿ ನಮ್ಮ ಮೇಲೆ ಹಗೆ ಸಾಧಿಸದೇ ನಿಮ್ಮ ವಿರುದ್ಧ ಕೆಲಸ ಮಾಡಿದವರ ವಿರುದ್ಧ ಹಗೆ ಸಾಧಿಸಿ ಎಂದು ಸವಾಲು ಎಸೆದರು.
ಅನರ್ಹತೆ ಪ್ರಕರಣದಲ್ಲಿ ಸ್ಪೀಕರ್ ಆ್ಯಕ್ಟರ್ ಆಗಿದ್ದಾರೆ. ಇದರ ಡೈರೆಕ್ಟರ್ ಯಾರು? ಸ್ಕ್ರಿಪ್ಟ್ ರೈಟರ್ ಹಾಗೂ ಪ್ರೂಡ್ಯೂಸರ್ ಯಾರು ಅಂತ ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಹೇಳುವೆ. ರಮೇಶ್ ಕುಮಾರ್ ಸಹ ಒಂದು ಬಾರಿ ಗೆಲ್ಲುತ್ತಾರೆ. ಒಂದು ಬಾರಿ ಸೋಲುತ್ತಾರೆ. ಗೆಲ್ಲುವಾಗ ಎಷ್ಟು ಪರಿಶ್ರಮ ಹಾಕಬೇಕು ಅವರಿಗೆ ಗೊತ್ತಾಗಬೇಕಲ್ವಾ? ನಾನು ಹುಟ್ಟುವ ಮೊದಲೇ ಶಾಸಕರಾಗಿ ವಿಧಾನಸೌಧ ಪ್ರವೇಶ ಮಾಡಿದ್ದಾರೆ. ಹೀಗಾಗಿ ಅವರು ಕೂಡ ಯಾರು ಎಷ್ಟೇ ಒತ್ತಡ ಹಾಕಿದರೂ ಅವರಿಗಿರುವ ಕಾನೂನಿನ ಇತಿಮಿತಿ ಓಳಗೆ ಅರಿವಿನ ಮೂಲಕ ವಸ್ತು ಸ್ಥಿತಿ ಅರ್ಥ ಮಾಡಿಕೊಂಡು ಪ್ರಕರಣ ಇತ್ಯರ್ಥ ಮಾಡಬೇಕಿತ್ತು. ಆಗ ನಿಮ್ಮ ವ್ಯಕ್ತಿತ್ವ ಇನ್ನೂ ಮೇಲೆ ಹೋಗಿರೋದು. ಆದರೆ ಆತ್ಮಸಾಕ್ಷಿಗೆ ಅನುಗುಣವಾಗಿ ಅಂತ ನಮ್ಮನ್ನ ಅನರ್ಹ ಮಾಡಿ ಎರಡು ವಿಧಾನಸಭೆಯನ್ನು ಕಗ್ಗೊಲೆ ಮಾಡಿಬಿಟ್ರಿ ಅಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದರು.