ಚಿಕ್ಕಬಳ್ಳಾರ: ಲಂಚ ಪಡೆದು ಕೆಲಸ ಮಾಡಿಕೊಡದಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಅಧಿಕಾರಿಯೊಬ್ಬರು ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವನಹಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಸ್ತರಣಾಧಿಕಾರಿ ಸರೋಜಾದೇವಿ ಧಮ್ಕಿ ಹಾಕಿದವರು. ಹೊಸಕೋಟೆ ತಾಲೂಕಿನ ನಂದಗುಡಿ ನಿವಾಸಿ ಮಂಜುನಾಥ್ ಅವರಿಗೆ ಸರೋಜಾದೇವಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸರೋಜಾದೇವಿ ಪರಿಶಿಷ್ಟ ಜಾತಿಯ ಯುವಕರಿಗೆ ಟ್ಯಾಕ್ಸಿ ಹಾಗೂ ರೈತರ ಹೊಲದಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ಕೊರೆಸಿಕೊಡುವುದಾಗಿ ಹೇಳಿ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಲಂಚ ಪಡೆದ ಅವರು ಕೆಲಸ ಮಾಡಿಕೊಡದೇ ಹೊಸಕೋಟೆಯಿಂದ ದೇವನಹಳ್ಳಿಗೆ ವರ್ಗಾವಣೆಯಾಗಿದ್ದಾರೆ. ಸಾಲ ಮಾಡಿ ಹಣ ಕೊಟ್ಟಿದ್ದ ರೈತರು ಮತ್ತು ಯುವಕರು ಕೊಟ್ಟ ಹಣವನ್ನು ಮರಳಿ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಸರೋಜಾದೇವಿ ಅಸಭ್ಯವಾಗಿ ಮಾತನಾಡಿದ್ದಾರೆ.
ಪರಿಶಿಷ್ಟ ಜಾತಿಯ ಕೋಟಾದಲ್ಲಿ ಟ್ಯಾಕ್ಸಿ ಕೊಡಿಸುವುದಾಗಿ ಹೇಳಿ ಸರೋಜಾದೇವಿ ನನ್ನ ಬಳಿ ಹಣ ಪಡೆದಿದ್ದಾರೆ. ಆದರೆ ಇಲ್ಲಿಯವರೆಗೂ ನನ್ನ ಕೆಲಸ ಮಾಡಿಕೊಟ್ಟಿಲ್ಲ. ಈ ಸಂಬಂಧ ವಿಚಾರಿಸಲು ಕರೆ ಮಾಡಿದ್ದಾಗ ಬಾಯಿಗೆ ಬಂದಂತೆ ಬೈದಿದ್ದಾರೆ. ನನಗೆ ಹಣ ವಾಪಸ್ ಕೊಡು ಅಂತ ಕೇಳುತ್ತಿಯಾ? ಮತ್ತೊಮ್ಮೆ ಹಣ ವಾಪಸ್ ಕೊಡು ಎಂದು ಕೇಳಿದರೆ ಊರಿಗೆ ಬಂದು ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಸರೋಜಾದೇವಿ ನನ್ನ ಮನೆಗೆ ಕೆಲ ಸಹಚರರನ್ನು ಕಳುಹಿಸಿ ಬೆದರಿಕೆ ಹಾಕಿಸುತ್ತಿದ್ದಾರೆ. ನನಗೆ ನ್ಯಾಯಕೊಡಿಸಿ ಎಂದು ಮಂಜುನಾಥ್ ಅಳಲು ತೊಡಿಕೊಂಡಿದ್ದಾರೆ.
ವಿಸ್ತರಣಾಧಿಕಾರಿ ಸರೋಜಾದೇವಿ ಪಡೆದಿರುವ ಲಂಚದ ವಿಡಿಯೋ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿರುವ ಆಡಿಯೋವನ್ನ ಮಂಜುನಾಥ್ ಬಿಡುಗಡೆಗೊಳಿಸಿದ್ದಾರೆ.