ರಾಮನಗರ: ಮೊದಲಿಗೆ ನಾವು ಭಾರತೀಯರು ಮತ್ತು ಕನ್ನಡಿಗರು. ಆದ್ದರಿಂದ ಪ್ರತಿಯೊಬ್ಬರೂ ಇಲ್ಲಿ ಇದನ್ನು ಅರಿತು ನಡೆಯಬೇಕು. ಹಿಜಬ್ ವಿಚಾರದಲ್ಲಿ ನ್ಯಾಯಾಲಯವು ತಮಗೆ ಬೇಕಾದಂತೆ ತೀರ್ಪು ಕೊಡಬೇಕಿತ್ತು ಎನ್ನುವ ಮೊಂಡು ವಾದ ಸರಿಯಲ್ಲ. ಇಂತಹ ಬೆದರಿಕೆಗಳಿಗೆಲ್ಲ ಸರ್ಕಾರ ಮಣಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಹಿಜಬ್ ತೀರ್ಪಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತ್ಯಂತ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಲಾಗಿದೆ. ಇಷ್ಟಕ್ಕೂ ಶಾಲೆಗಳಲ್ಲಿ ಸಮವಸ್ತ್ರ ನಿಯಮವನ್ನು ತಂದಿದ್ದು ಬಿಜೆಪಿಯಲ್ಲ. ಹಿಜಬ್ ಪರ ಮಾತನಾಡುತ್ತಿರುವವರು ನಮ್ಮ ಪಕ್ಷಗಳೇ ಇದನ್ನೆಲ್ಲ ತಂದಿದೆ ಎಂದು ನಂಬಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ
ನಮ್ಮಲ್ಲಿ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲರೂ ಅವರವರ ಅಭಿಪ್ರಾಯ ಹೇಳಬಹುದು. ಬೇಕಿದ್ದವರು ಸುಪ್ರೀಂ ಕೋರ್ಟಿಗೆ ಹೋಗಲಿ. ಆದರೆ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಸಮವಸ್ತ್ರದ ವಿಚಾರದಲ್ಲಿ ಸರ್ಕಾರವು ಹಿಜಬ್ ಮತ್ತು ಕೇಸರಿ ಶಾಲು ಎರಡನ್ನೂ ದೂರವಿಟ್ಟಿದೆ. ನ್ಯಾಯಾಲಯ ಕೂಡ ವಿಚಾರವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ವಿವೇಚನೆಯ ತೀರ್ಪು ಕೊಟ್ಟಿದೆ. ಹಿಜಬ್ ಕಡ್ಡಾಯವೆಂದು ಕುರಾನಿನಲ್ಲಿ ಕೂಡ ಹೇಳಿಲ್ಲ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದತ್ತ ಗಮನ ಕೊಡಬೇಕು. ಜೊತೆಗೆ ಎಲ್ಲರೂ ಸೌಹಾರ್ದದಲ್ಲಿ ನಂಬಿಕೆ ಇಡಬೇಕು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕರೀನಾ ಕಪೂರ್ ಕಮ್ ಬ್ಯಾಕ್ – ಜಪಾನಿ ಲೇಖಕನ ಕೃತಿಗೆ ಮಿಲ್ಕಿ ಬ್ಯೂಟಿ ಹೀರೋಯಿನ್