ಬೆಂಗಳೂರು: ಆರ್ಎಸ್ಎಸ್ನವರಿಗೆ ಬಿಜೆಪಿಯವರಿಗೆ ಯಾರೂ ಹೆದರಬೇಡಿ. ಕಾಂಗ್ರೆಸ್ ನಿಮ್ಮ ಪರವಾಗಿದೆ. ಎಲ್ಲೆ ತೊಂದರೆ ಆದರೂ ನಮ್ಮ ಕಾರ್ಯಕರ್ತರನ್ನು ಕಳುಹಿಸಿ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಲಾಲ್ ಕಟ್ ಬಗ್ಗೆ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ನಾಲ್ಕಾರು ದಿನದಿಂದ ರೈತರ ಬದುಕಿನ ಮೇಲೆ ದೊಡ್ಡ ಗದಾಪ್ರಹಾರ ಆಗುತ್ತಿದೆ. ರಾಜಕೀಯ ಗುರಿಯಾಗಿಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸಲು ಒಂದು ಸಮುದಾಯದ ಮೇಲೆ ಪ್ರಹಾರ ನಡೆಸಲಾಗುತ್ತಿದೆ. ಪಶು ಸಂಗೋಪನೆ ಇಲಾಖೆಯಿಂದ ನಿನ್ನೆ ಒಂದು ಆದೇಶ ಆಗಿದೆ. ದೂರು ಬಂದ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಗಳನ್ನು ವದೆ ಮಾಡುವ ಮುನ್ನ ಪ್ರಜ್ಞೆ ತಪ್ಪಿಸಲು ಆದೇಶ ಮಾಡಲಾಗಿದೆ. ಕೆಲವರು ಹಲಾಲ್ ಮಾಡುತ್ತಾರೆ, ಕೆಲವರು ಹಲಾಲ್ ಮಾಡಲ್ಲ. ಆಪರೇಷನ್ ಮಾಡುವಾಗ ಪ್ರಜ್ಞೆ ತಪ್ಪಿಸಿ ಆಪರೇಷನ್ ಮಾಡುವ ಪದ್ದತಿ ಇದೆ. ಆದರೆ ಕೋಳಿ, ಕುರಿಗೆ ಹಾಗೆ ಮಾಡುವುದಕ್ಕೆ ಆಗುತ್ತಾ? ಕೋಳಿ, ಕುರಿ ಬಲಿ ಕೊಡುವುದು ನಮ್ಮ ಪದ್ದತಿ ಸಂಪ್ರದಾಯ ಇದೆ. ಮಾರಮ್ಮನಿಗೆ ನಾನು ಕೋಳಿ ಹರಕೆ ಮಾಡಿಕೊಂಡಿದ್ದೇನೆ. ನಾವು ಬಲಿಗೆ ಮುನ್ನ ತಲೆಗೆ ತೀರ್ಥ ಹಾಕಿ ಅದು ತಲೆ ಅಲ್ಲಾಡಿಸಿದ ಮೇಲೆ ಬಲಿ ಕೊಡುತ್ತೇವೆ. ಹಾಗೆ ಒಂದೊಂದು ಕಡೆ ಒಂದೊಂದು ಪದ್ಧತಿ ಇದೆ ಎಂದಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಾಟ – ಇಬ್ಬರು ಆರೋಪಿಗಳು ಸೆರೆ
ನಾನು ಸ್ಟೂಡೆಂಟ್ ಆಗಿದ್ದಾಗ ಬೆಂಗಳೂರಿನಲ್ಲಿ ವಿನಾಯಕ ಫೌಲ್ಟ್ರಿ ಫಾರಂ ಇಟ್ಟಿದ್ದೆ. ಅದರ ಕಷ್ಟ, ನಷ್ಟ ನನಗೆ ಗೊತ್ತಿದೆ. ವರ್ಷ ತೊಡಕು ಹೊಸದಾಗಿ ಬಂದಿದೆಯಾ? ಪ್ರತಿ ವರ್ಷ ಮಾಡಲ್ವಾ? ಎಲ್ಲಾ ಫ್ರೆಶ್ ಚಿಕನ್, ಮಟನ್ ಕೊಡುತ್ತಿದ್ದಾರಲ್ಲ. ಬೇಕಿದ್ದರೆ ಕೇಳಿ ನೋಡಿ ಏನಾಗಿದೆ. ಆರ್ಎಸ್ಎಸ್ನವರಿಗೆ ಬಿಜೆಪಿಯವರಿಗೆ ಯಾರೂ ಹೆದರಬೇಡಿ. ಕಾಂಗ್ರೆಸ್ ನಿಮ್ಮ ಪರವಾಗಿದೆ. ಎಲ್ಲೆ ತೊಂದರೆ ಆದರೂ ನಮ್ಮ ಕಾರ್ಯಕರ್ತರನ್ನು ಕಳುಹಿಸಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: RK ಹೌಸ್ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ
ಮುಖ್ಯಮಂತ್ರಿಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಂವಿಧಾನ ಬದ್ಧವಾಗಿ ಪ್ರಮಾಣ ಮಾಡಿ ಬಂದಿದ್ದೀರಾ. ಕೂಡಲೇ ಇದನ್ನೆಲ್ಲಾ ನಿಲ್ಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳಿ ನಿಮ್ಮ ಪಕ್ಷದ ಹೆಸರು ಹೇಳಿಕೊಂಡು ಇದನ್ನೆಲ್ಲಾ ಮಾಡುತ್ತಿರುವವರನ್ನು ನಿಲ್ಲಿಸಿ. ಸಂಜೆಯೊಳಗೆ ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.