ನವದೆಹಲಿ: ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಿಂದಾಗಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದೆ. ಇದೀಗ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನಗಳಲ್ಲಿ (Air India Flight) ಸಿಖ್ಖರು ಪ್ರಯಾಣಿಸದಂತೆ ಎಚ್ಚರಿಕೆ ನೀಡಿದ್ದಾನೆ.
ಗುರುಪತ್ವಂತ್ ಪನ್ನುನ್ನ ಹೊಸ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ನವೆಂಬರ್ 19 ರಂದು ನಿಮ್ಮ ಜೀವಕ್ಕೆ ಅಪಾಯವಿದೆ. ಏರ್ ಇಂಡಿಯಾ ವಿಮಾನಗಳಲ್ಲಿ ಸಿಖ್ ಸಮುದಾಯದ ಜನರು ಪ್ರಯಾಣಿಸಬೇಡಿ ಎಂದು ಎಚ್ಚರಿಕೆ ನೀಡಿದ್ದು, ಇದು ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿಯನ್ನು ಸೂಚಿಸುತ್ತದೆ.
ವೈರಲ್ ಆಗಿರುವ ವೀಡಿಯೋದಲ್ಲಿ, ನಾವು ಸಿಖ್ ಜನರನ್ನು ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನದ ಮೂಲಕ ಪ್ರಯಾಣಿಸಬೇಡಿ ಎಂದು ಕೇಳಿಕೊಳ್ಳುತ್ತೇವೆ. ಅಂದು ಜಾಗತಿಕ ದಿಗ್ಬಂಧನ ಇರುತ್ತದೆ. ನವೆಂಬರ್ 19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಹೇಳಿದ್ದಾನೆ. ಇದನ್ನೂ ಓದಿ: ಅರಣ್ಯ ಸಿಬ್ಬಂದಿ, ಬೇಟೆಗಾರರ ನಡುವೆ ಗುಂಡಿನ ಚಕಮಕಿ – ಓರ್ವ ಗುಂಡೇಟಿಗೆ ಬಲಿ
ದೇಶವಿರೋಧಿ ಚಟುವಟಿಕೆಗಳಿಗಾಗಿ ಭಾರತದಲ್ಲಿ ಬೇಕಾಗಿರುವ ಗುರುಪತ್ವಂತ್ ಪನ್ನುನ್ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣವನ್ನು ನವೆಂಬರ್ 19 ರಂದು ಮುಚ್ಚಿ, ಅದರ ಹೆಸರನ್ನು ಬದಲಾಯಿಸುವುದಾಗಿ ಹೇಳಿದ್ದಾನೆ. ಐಸಿಸಿ ವಿಶ್ವಕಪ್ 2023 ರ ಅಂತಿಮ ಪಂದ್ಯವೂ ಕೂಡಾ ಅದೇ ದಿನ ನಡೆಯಲಿದೆ. ಅಂದೇ ದಾಳಿಯ ಕುರಿತು ಪನ್ನುನ್ ವೀಡಿಯೋದಲ್ಲಿ ಸೂಚಿಸಿ ಎಚ್ಚರಿಕೆ ನೀಡಿದ್ದಾನೆ.
ತನ್ನ ವಿರುದ್ಧ ಎಲ್ಲಾ ಬಂಧನ ವಾರಂಟ್ಗಳ ಹೊರತಾಗಿಯೂ ಪನ್ನುನ್ ಖಲಿಸ್ತಾನಿ ಅಜೆಂಡಾವನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾನೆ. ನಾವು ಭಾರತದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬನ್ನು ಮುರಿಯಲಿದ್ದೇವೆ ಎಂದಿದ್ದು ಮಾತ್ರವಲ್ಲದೇ ವಿಶ್ವಕಪ್ 2023 ಅನ್ನು ‘ವಿಶ್ವ ಭಯೋತ್ಪಾದಕ ಕಪ್’ ಎಂದು ಕರೆದಿದ್ದಾನೆ. ಇದನ್ನೂ ಓದಿ: ದೇಶದಲ್ಲಿ ಫಸ್ಟ್ – ಶಂಕಿತ ಉಗ್ರರ ಕಾಲಿಗೆ ಜಿಪಿಎಸ್ ಬಳೆ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದಾಳಿ ನಡೆಸುವುದಾಗಿ ಭಯೋತ್ಪಾದಕ ಬೆದರಿಕೆ ಹಾಕಿದ್ದು, ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ರೀತಿಯ ಪರಿಸ್ಥಿತಿ ಭಾರತದಲ್ಲೂ ಉಂಟಾಗಬಹುದು ಎಂದು ಹೇಳಿದ್ದ.