-ದೇಶದಲ್ಲಿ ಕಡ್ಡಾಯ ಮತದಾನ ಕಾನೂನು ಅವಶ್ಯ
-ಪ್ರತಿಯೊಬ್ಬರು ಮತ ಚಲಾಯಿಸಬೇಕು
ಬೆಂಗಳೂರು: ಕಡ್ಡಾಯ ಮತದಾನ ಜಾರಿಗೆ ಕಾನೂನು ಮಾಡಬೇಕು. ಚುನಾವಣೆ ಮೊದಲು ಪ್ರಜೆಗಳೇ ಪ್ರಭುಗಳು, ಬಳಿಕ ಗೆದ್ದವರೇ ಪ್ರಭುಗಳು ಆಗ್ತಾರೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ನೆಲಮಂಗಲದಲ್ಲಿ ಹೇಳಿದ್ದಾರೆ.
ನೆಲಮಂಗಲದ ವೀರಾಪುರ ಗ್ರಾಮದಲ್ಲಿ ಮಾತನಾಡಿದ ಅವರು, ಚುನಾವಣೆ ದೇಶದ ಒಂದು ಅವಿಭಾಜ್ಯ ಅಂಗವಾಗಿದೆ. ಪ್ರಜಾಪ್ರಭುತ್ವದ ಯಶಸ್ಸು ಚುನಾವಣೆ ಮೇಲೆ ನಿಂತಿದೆ. ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಚುನಾವಣೆಯಲ್ಲಿ ಪ್ರಜೆಯೇ ಪ್ರಭು ಅನ್ನೋ ಭಾವನೆಯಿರುತ್ತೆ, ಬಳಿಕ ಅವರೇ ಪ್ರಭುಗಳು ಆಗಿಬಿಡ್ತಾರೆ. ಆದ್ದರಿಂದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಮುಂದಿನ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಬಂದಿದೆ. ಹಾಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಶ್ರೀಗಳು ಹೇಳಿದರು.
ನಮ್ಮ ದೇಶದಲ್ಲಿ ಕಡ್ಡಾಯ ಮತದಾನ ಮಾಡಿಲ್ಲ. ಅದನ್ನು ಜಾರಿಗೆ ತರುವ ಕಾನೂನು ಮಾಡಬೇಕು. ಯಾರಿಗಾದರೂ ಮತಕೊಡಿ ಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಹಣಕ್ಕಾಗಿ, ವಸ್ತುಗಳ ಆಮಿಷಕ್ಕೆ ಒಳಗಾಗದೆ ಮತದ ಪಾವಿತ್ರತೆಯನ್ನು ಹೆಚ್ಚಿಸಿ ಎಂದು ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳ ಅವರ ಜನ್ಮಸ್ಥಳದಲ್ಲಿ ಪುಣ್ಯ ಸ್ಮರಣೆ ಕಾರ್ಯಕ್ರಮದ ವೇಳೆ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.