ಬೆಂಗಳೂರು: ಶ್ರೀನಿವಾಸ ರಾಜು ನಿರ್ದೇಶನದ `ದಂಡುಪಾಳ್ಯ-3′ ಚಿತ್ರ ತೆರೆಕಾಣಲು ಇನ್ನು ಮೂರು ದಿನವಷ್ಟೇ ಬಾಕಿ. ಈ ಹಿಂದಿನ ಸರಣಿಯ ಎರಡು ಚಿತ್ರಗಳಿಗಿಂತಲೂ ಈ ಚಿತ್ರದ ಬಗ್ಗೆ ಹುಟ್ಟಿಕೊಂಡಿರುವ ಕುತೂಹಲ ತುಸು ಹೆಚ್ಚೇ ಇದೆ. ಯಾಕೆಂದರೆ ಸ್ವತಃ ನಿರ್ದೇಶಕರೇ ಇದು ಕಡೆಯ ಕಂತೆಂದು ಹೇಳಿಕೊಂಡಿದ್ದಾರೆ.
ದಂಡುಪಾಳ್ಯವೆಂಬುದು ಹಿಂಸೆ ಮತ್ತು ರಕ್ತದಿಂದ ಬೇರ್ಪಡಿಸಿ ನೋಡಲಾರದಂತಹ ಕಥೆ. ಇದನ್ನು ನೀವ್ಯಾಕೆ ನೋಡ್ಬೇಕು ಎಂದು ಕೇಳಿದರೆ ನಿರ್ದೇಶಕ ಶ್ರೀನಿವಾಸ ರಾಜು ಹೀಗಂತಾರೆ – ಈ ಹಿಂದಿನ ಎರಡು ಕಂತುಗಳನ್ನು ನೋಡಿದವರು, ಒಟ್ಟಾರೆ ಚಿತ್ರದ ಅಸಲಿ ಕತೆ ಏನೆಂದು ತಿಳಿಯಲು ದಂಡುಪಾಳ್ಯ-3ನ್ನು ನೋಡಲೇ ಬೇಕು ಎಂದು ಹೇಳುತ್ತಾರೆ.
ದಂಡುಪಾಳ್ಯ ಹೆಸರಿನಲ್ಲಿ ಈ ಹಿಂದೆ ಬಂದ ಎರಡು ಭಾಗಗಳೂ ಯಶಸ್ವಿಯಾಗಿತ್ತು. ಚಿತ್ರದಲ್ಲಿ ಹಿಂಸೆ ಮಾತ್ರ ಕೊಟ್ಟಿದ್ದರೆ ಜನರಿಗೆ ಇದರ ಬಗ್ಗೆ ಕುತೂಹಲವಿರುತ್ತಿರಲಿಲ್ಲ. ಹಾಗಾಗಿದ್ದರೆ ಎರಡನೇ ಭಾಗವನ್ನು ಮಾಡುವುದಕ್ಕೂ ಚಿತ್ರತಂಡ ಮುಂದಾಗುತ್ತಿರಲಿಲ್ಲ. ಆದರೆ ಎಲ್ಲವನ್ನೂ ಹದವರಿತು ಭಿನ್ನವಾದ ನಿರೂಪಣೆಯೊಂದಿಗೆ ಅದ್ಭುತವಾದ ದೃಶ್ಯ ಕಟ್ಟಿಕೊಟ್ಟಿದ್ದರು ನಿರ್ದೇಶಕ ಶ್ರೀನಿವಾಸ ರಾಜು.
ಚಿತ್ರದ ಕೊನೆಯ ಭಾಗದಲ್ಲಿ ಏನಿರಬಹುದು ಅಂತಾ ನಿಮ್ಮ ಯೋಚನೆಯಾಗಿದ್ದರೆ ಚಿತ್ರದಲ್ಲಿ ಪ್ರೇಕ್ಷಕರಿಗೆ ಅಚ್ಚರಿಯಾಗುವ ಅಂಶವೇ ಇದೆಯಂತೆ. ಅದೇನಂತ ಗೊತ್ತಾಗ್ಬೇಕಾದರೆ ದಂಡುಪಾಳ್ಯ-3ನ್ನು ತಪ್ಪದೇ ನೋಡಿ.