ನವದೆಹಲಿ: ಬಹುಜನ ಸಮಾಜ ಪಕ್ಷ (ಬಿಎಸ್ಪಿ) ನಾಯಕಿ ಮಾಯಾವತಿ ನಿನ್ನೆಯಷ್ಟೇ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ನಾನು ಪ್ರಧಾನಿ ಅಭ್ಯರ್ಥಿ ಎಂದು ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ತಾವು ಪ್ರಧಾನಿಯಾಗುವ ಬಗ್ಗೆ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 1995ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಸಿಎಂ ಆಗಿ ಆಯ್ಕೆ ಅಧಿಕಾರ ಸ್ವೀಕರಿಸಿದ ಕುರಿತು ಮಾಯಾವತಿ ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) ಜೊತೆಗೆ ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಈ ಸಂಬಂಧ ಜನವರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಎಸ್ಪಿ ನಾಯಕ ಅಖಿಲೇಶ್ ಯಾದವ್, ಮಾಯಾವತಿ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರು. ಆದರೆ ಈಗ ಮಾಯಾವತಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಮುಂದೇನು ಎನ್ನುವ ಪ್ರಶ್ನೆ ಎಸ್ಪಿ, ಬಿಎಸ್ಪಿ ಮೈತ್ರಿಯಲ್ಲಿ ಶುರುವಾಗಿತ್ತು. ಇದಕ್ಕೆ ಮಾಯಾವತಿ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.
ಟ್ವೀಟ್ನಲ್ಲಿ ಏನಿದೆ?:
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 1995ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದೆ. ಆಗ ನಾನು ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದ್ಯಸೆ ಆಗಿರಲಿಲ್ಲ. ಅದೇ ರೀತಿ ಪ್ರಧಾನಿಯಾದ ಆರು ತಿಂಗಳ ಒಳಗಾಗಿ ಲೋಕಸಭೆ ಇಲ್ಲವೇ ರಾಜ್ಯಸಭೆಯಲ್ಲಿ ಸದಸ್ಯತ್ವ ಪಡೆಯಬೇಕಾಗುತ್ತದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ನನ್ನ ನಿರ್ಧಾರವನ್ನು ನಿರಾಶೆಗೊಳಿಸಬೇಡಿ ಎಂದು ಮಾಯಾವತಿ, ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
When I became UP CM first time in 1995 I was not member of either UP Assembly or Council. Similarly is provision at the Centre where a person have to be a LS/RS member within 6 months of holding office of minister/PM. Don't disheartened from my decision not to contest LS poll now
— Mayawati (@Mayawati) March 20, 2019
ಪ್ರಧಾನಿ ಅಥವಾ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ವ್ಯಕ್ತಿ ಲೋಕಸಭಾ ಅಥವಾ ರಾಜ್ಯಸಭೆಯ ಸದಸ್ಯರಾಗಿರಬೇಕು. ಸದಸ್ಯರಾಗದೇ ಇದ್ದರೂ ಪ್ರಮಾಣವಚನ ಸ್ವೀಕರಿಸಬಹುದು. ಆದರೆ ಅಧಿಕಾರ ಸ್ವೀಕರಿಸಿದ 6 ತಿಂಗಳ ಒಳಗಡೆ ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಾಗಬೇಕಾಗುತ್ತದೆ. ಈ ಅವಧಿಯ ಒಳಗಾಗಡೆ ಸದಸ್ಯರಾಗದೇ ಇದ್ದಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ.