ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ಮ್ಯಾಜಿಕ್ ನಂಬರ್ ಇರುವವರೆಗೂ ಇರುತ್ತೆ, ಎಲ್ಲಿಯವರೆಗೂ ಇರುತ್ತೆ ಗೊತ್ತಿಲ್ಲ ಎಂದು ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಮ್ಯಾಜಿಕ್ ನಂಬರ್ ಇರೋವರೆಗೆ ಇರುತ್ತೆ ಎಂದು ಸರ್ಕಾರದ ಬಗ್ಗೆ ದೋಸ್ತಿ ನಾಯಕರೆ ಹೇಳಿಕೆ ನೀಡಿದ್ದಾರೆ. ಬಳಿಕ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನಾ ಏನು ಹೇಳಲ್ಲ ಅದು ಅವರ ವೈಯಕ್ತಿಕ ವಿಚಾರ. ನಾನು ರಾಜೀನಾಮೆ ನೀಡಲ್ಲ. ನನ್ನನ್ನು ಯಾರು ಸಂಪರ್ಕ ಮಾಡಿಲ್ಲ. ನಮ್ಮ ನಡೆ ಕೆಲಸದ ಕಡೆ. ನಾನು ನನ್ನ ಕೆಲಸ ಮಾಡುತ್ತೇನೆ. ನಾನು ಮೈತ್ರಿ ಸರ್ಕಾರದ ಜೊತೆಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಕ್ಕೆ ನಾನು ಸಲಹೆ ಕೊಡುವಷ್ಟು ದೊಡ್ಡವನ್ನಲ್ಲ. ಅವರ ಟೆನ್ಷನ್ ಅವರಿಗೆ ಇರುತ್ತೆ. ನಾ ಮಾತ್ರ ಕೂಲ್ ಆಗಿ ಇದ್ದೇನೆ ಎಂದು ಹೇಳಿದ್ದಾರೆ. ಬಳಿಕ ಬಿಜೆಪಿ ಜೊತೆ ಹೋಗುವ ಮಾತೇ ಇಲ್ಲ. ಈ ರೀತಿ ಪ್ರಶ್ನೆಗಳನ್ನು ಕೇಳುವುದು ತಪ್ಪು. ನಾನು ಎಂ.ಬಿ ಪಾಟೀಲ್, ರಮೇಶ್ ಜಾರಕಿಹೊಳಿ ಯಾರ ಜೊತೆಗೂ ಗುರುತಿಸಿಕೊಂಡಿಲ್ಲ. ಅದು ಮಾಧ್ಯಮದವರ ಸೃಷ್ಟಿ. ಬಿಜೆಪಿ ಆಫರ್ ಮಾಡಿದ್ದರು ಎಂದು ನನ್ನ ಹೆಸರು ಮಂತ್ರಿ ಸ್ಥಾನದಲ್ಲಿತ್ತು ಎನ್ನುವುದು ತಪ್ಪು ಎಂದಿದ್ದಾರೆ.
ನನ್ನ ಕ್ಷೇತ್ರದ ಜನರಿಗೆ ನನ್ನ ಏನು ಕೇಳಿದರೂ ಉತ್ತರ ಕೊಡುತ್ತೇನೆ. ಸದ್ಯ ನಾನು ಮೈತ್ರಿ ಸರ್ಕಾರದಲ್ಲಿ ಇದ್ದೇನೆ. ರಾಜೀನಾಮೆಗಳ ವೈಯಕ್ತಿಕ ವಿಚಾರಗಳ ಬಗ್ಗೆ ನಾನು ಏನು ಹೇಳಲ್ಲ. ಸರ್ಕಾರದ ಇನ್ನು ಮುಂದಿನ ಬೆಳವಣಿಗೆಗಳು ನನಗೆ ಗೊತ್ತಿಲ್ಲ. ಸದ್ಯ ನನಗೆ ಕೆಲಸ ಇದೆ ಹೋಗುತ್ತೇನೆ. ಇನ್ನು ಕೆಲಸ ಇಲ್ಲದೆ ಈಗ ನಾನು ಸ್ಪೀಕರ್ ಭೇಟಿ ಮಾಡುವ ಸಂಭವ ಇಲ್ಲ ಎಂದು ಹೇಳಿದ್ದಾರೆ.