– ಲಕ್ಷಣಗಳು ಕಂಡ ಕೂಡಲೇ ಚಿಕಿತ್ಸೆ ಪಡೆಯಬೇಕು
ಬಳ್ಳಾರಿ: ಯಕೃತ್ತಿನ (Liver) ಮೇಲೆ ಪರಿಣಾಮ ಬೀರುವ ಹೆಪಟೈಟಿಸ್-ಬಿ (Hepatitis B) ಒಂದು ವೈರಸ್ (Virus) ಸೋಂಕಾಗಿದ್ದು, ಗಾಢವಾದ ಮೂತ್ರದ ಬಣ್ಣದಲ್ಲಿ ಬದಲಾವಣೆ, ವಾಕರಿಕೆ ಮುಂತಾದವುಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಚಿಕಿತ್ಸೆ ಪಡೆಯುವ ಮೂಲಕ ಆರಂಭದಲ್ಲಿಯೇ ರೋಗ ನಿಯಂತ್ರಣಕ್ಕೆ ಸಹಕರಿಸಿ ಎಂದು ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕರಾದ ಡಾ.ಶಕೀಲಾ.ಎನ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ನಿರ್ದೇಶನಾಲಯದಡಿ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದ ಮೂಲಕ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು, ಫಿಜಿಷಿಯನ್, ತಜ್ಞ ವೈದ್ಯರುಗಳಿಗೆ ಬಳ್ಳಾರಿ ನಗರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಕಾಮಾಲೆ ಎಂದು ಕರೆಸಿಕೊಳ್ಳುವ ಹೆಪಟೈಟಿಸ್-ಬಿ ಸೋಂಕು ಆರಂಭದಲ್ಲಿ ಚಿಹ್ನೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಕ್ರಮೇಣ ಚರ್ಮ ಮತ್ತು ಕಣ್ಣುಗಳ ಹಳದಿ, ಗಾಢ ಮೂತ್ರ, ತೀವ್ರ ಆಯಾಸ, ವಾಕರಿಕೆ, ವಾಂತಿ ಸ್ನಾಯು ಮತ್ತು ಕೀಲು ನೋವು, ಹಸಿವಾಗದಿರುವಿಕೆ, ಹೊಟ್ಟೆ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು, ಈ ಹಂತದಲ್ಲಿಯೂ ನಿರ್ಲಕ್ಷಿಸಿದರೆ ಗಂಭೀರ ಸ್ಥಿತಿಗೆ ರೋಗಿಯ ಆರೋಗ್ಯ ಬದಲಾಗಬಹುದು. ಇದಕ್ಕಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮತ್ತು ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು, 2030 ರ ವೇಳೆಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು. ಇದನ್ನೂ ಓದಿ: ಗ್ಯಾರಂಟಿಗೆ ಅನುದಾನ ಕಳೆದ ಬಾರಿ ಎಷ್ಟಿತ್ತು? ಈ ಬಾರಿ ಎಷ್ಟು ಹಂಚಿಕೆಯಾಗಿದೆ? ಸಾಲ ಎಷ್ಟು?
ಕಾರ್ಯಕ್ರಮದಲ್ಲಿ ಡಿಎಚ್ಓ ಡಾ.ಯಲ್ಲಾ ರಮೇಶ್ ಬಾಬು, ಬಿಮ್ಸ್ ನಿರ್ದೇಶಕ ಡಾ.ಬಿ.ಗಂಗಾಧರ ಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್ ಬಸರೆಡ್ಡಿ, ಎನ್.ವಿ.ಹೆಚ್.ಸಿ.ಪಿ ಸಲಹೆಗಾರರಾದ ಡಾ.ಹರ್ಷಿತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿಪಿಸಿ ಅರ್ಚನಾ, ಡ್ಯಾಪ್ಕೋ ಮೇಲ್ವಿಚಾರಕ ಗಿರೀಶ್, ಪಿಪಿಸಿ ಅನಿಲ್ ಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಪಂಪಾಪತಿ ಸೇರಿದಂತೆ 7 ಜಿಲ್ಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.