ಹೋಳಿಯು ದೇಶದಾದ್ಯಂತ ಹೆಚ್ಚು ಉತ್ಸಾಹ ಮತ್ತು ಸಡಗರದಿಂದ ಆಚರಿಸಲಾಗುವ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದು. ಇದು ಸಾಮಾನ್ಯ ಹಬ್ಬವಲ್ಲ, ರಂಗಿನಾಟದಲ್ಲಿ ಜಗತ್ತಿಗೇ ಮೋಡಿ ಮಾಡಿರುವ ಹಬ್ಬ.. ಬಣ್ಣದೋಕುಳಿಯ ಆಟವೆಂದರೆ, ಸಂಭ್ರಮದ ಉತ್ಸವ. ಸಂಪ್ರದಾಯ, ಆಧುನಿಕತೆ, ಆಕರ್ಷಣೆ, ಜನಪ್ರಿಯತೆಗಳಲ್ಲಿ ಜಗತ್ತಿನ ಯಾವ ಹಬ್ಬವೂ ಇದನ್ನು ಸರಿಗಟ್ಟಲು ಸಾಧ್ಯವಿಲ್ಲ…
ಅಂದು ನಮ್ಮ ಜನ ಅದರಲ್ಲೂ, ಉತ್ಸಾಹಿ ಯುವಕ-ಯುವತಿಯರು ಮುಂಜಾನೆಯೇ ಬಣ್ಣಗಳನ್ನು ಹಿಡಿದು ಬೀದಿಗಿಳಿಯುತ್ತಾರೆ. ತಾವು ಬಣ್ಣ ಹಚ್ಚಿಕೊಳ್ಳುವುದು ಮಾತ್ರವೇ ಅಲ್ಲ, ದಾರಿಯಲ್ಲಿ ಹೋಗುವವರಿಗೆಲ್ಲ ಬಣ್ಣದ ಬಲವಂತದ ಲೇಪ ಹಾಕಿಬಿಡುತ್ತಾರೆ. ಬೇಡ ಅಂದ್ರೂ ಬಿಡದೇ, ಕನಿಷ್ಠ ಒಂದು ತಿಲಕವನ್ನಾದ್ರೂ ಹಚ್ಚಿದ್ರೇನೆ ಅವರಿಗೆ ಸಮಾಧಾನ. ಇನ್ನೂ ಕೆಲವರಿಗೆ ಬಣ್ಣದೋಕುಳಿಯಲ್ಲಿ ಒದ್ದೆಯಾಗದಿದ್ದರೆ ನಿದ್ರೆನೇ ಬರಲ್ಲ. ಬಣ್ಣವನ್ನು ನೀರಿನಲ್ಲಿ ಕಲಸಿ ಸಿಕ್ಕವರ ಮುಖಕ್ಕೆ ಎರಚುವುದೆಂದರೆ ಎಲ್ಲಿಲ್ಲದ ಸಂಭ್ರಮ. ಇನ್ನೂ ಹೆಚ್ಚಿನ ಉತ್ಸಾಹಿಗಳು ಬಕೆಟ್ ನೀರಿನಲ್ಲಿ ಬಣ್ಣ ಕಲಸಿ ಮೈಮೇಲೆ ಎರಚುತ್ತಾರೆ. ಎಳೆಯರು ಮತ್ತು ಹೆಂಗಸರು ನೀರು ಎರಚಲು ಪಿಚಕಾರಿ ಬಳಸಿದರೆ, ಅದನ್ನು ಅಪಾಯ ಎಂದು ಭಾವಿಸುವವರು ಮಹಡಿಗಳ ಮೇಲಿನಿಂದ ಬಣ್ಣದ ನೀರು ತುಂಬಿದ ಬಲೂನುಗಳನ್ನು ಎಸೆಯುತ್ತಾರೆ. ಶಾಲೆ, ಕಾಲೇಜುಗಳಲ್ಲೂ ಈ ಸಂಭ್ರಮಕ್ಕೆ ಎಲ್ಲೆ ಇಲ್ಲ.
ಅದರಂತೆ ಹೋಳಿ ಅತಿರೇಕಗಳ ಹಬ್ಬ ಅಂದ್ರೂ ತಪ್ಪಾಗಲಾದರು. ಇದರ ಉತ್ಸಾಹ, ಆವೇಶ ಬಣ್ಣ ಹಚ್ಚುವುದಷ್ಟಕ್ಕೇ ತೀರುವುದಿಲ್ಲ. ಭಾಂಗ್ ಕುಡಿದು ಮತ್ತೇರಿ ಚೇಷ್ಠೆಯಾಡುವುದು, ಸಿಕ್ಕವರನ್ನು ಛೇಡಿಸುವುದು, ಬಣ್ಣದ ಕೆಸರಿನಲ್ಲಿ ಎಳೆದು ಮುಳುಗಿಸುವುದು, ಹೆಂಗಳೆಯರೊಡನೆ ಸರಸವಾಡುವುದು… ಉಂಟು. ಯಾದ್ರೂ ಚಕಾರ ಎತ್ತಿದ್ರೆ ಅದಕ್ಕೆ ಉತ್ತರ ಕೂಡ ರೆಡಿ ಇರುತ್ತೆ. ತಪ್ಪು ಭಾವಿಸಬೇಡ ಗೆಳೆಯ ಇದು ಹೋಳಿ ಹಬ್ಬ ಅಂತ ಮುಂದ್ಕೆ ಹೋಗ್ತಾ ಇರ್ತಾರೆ. ಆದ್ರೆ ಇದನ್ನೆ ನೆಪ ಮಾಡಿಕೊಳ್ಳುವ ಕೆಲವು ಕಿಡಿಗೇಡಿಗಳು… ಹೆಣ್ಣು ಮಕ್ಕಳ ಮೈಕೈ ಮುಟ್ಟೋದು.. ಹೆಂಗಸರು, ದಾರಿ ಹೋಕರೊದಡನೆ ಕಿರಿ ಕಿರಿ ಮಾಡೋದು ಮಾಡುತ್ತಿರುತ್ತಾರೆ.
ಬಣ್ಣದ ಪುಂಡರಿದ್ದಾರೆ ಎಚ್ಚರಿಕೆ
ಹೋಳಿಯ ದಿನ ರಂಗಿನಾಟದ ಸಂಭ್ರಮ ಹುಚ್ಚಾಟದ ಎಲ್ಲ ಎಲ್ಲೆಗಳನ್ನು ಮೀರುವುದು ನೋಡುತ್ತಲೇ ಇರಯತ್ತೇವೆ. ಬೀದಿಗಳಲ್ಲಿ ಹೋಳಿ ಗುಂಪುಗಳ ರಂಪಾಟ ಬಡಪಾಯಿ ದಾರಿಹೋಕರ ಮೇಲೂ ಎರಗುತ್ತದೆ. ಈ ಹುಚ್ಚಾಟದಲ್ಲಿ ಹೋಳಿ ಅಶ್ಲೀಲವಾಗುತ್ತದೆ, ಅಪಾಯಕಾರಿಯಾಗುತ್ತದೆ. ರಂಗಿನ ಜೊತೆಗೇ ಹುಚ್ಚಾಟದ ಎಲ್ಲೆಗಳೂ ಮೀರುತ್ತಾ ಹೋಗುತ್ತಿವೆ. ಹೋಳಿಯಾಟದ ಸಂಭ್ರಮದಲ್ಲಿ ಹತ್ತಿರದ ಗೆಳೆಯರೂ ಮಿತಿ, ಮರ್ಯಾದೆ ತಪ್ಪುತ್ತಾರೆ. ಪುಂಡರು ಮತ್ತು ರೌಡಿಗಳೂ ರಂಗಿನ ನೆವದಲ್ಲಿ ದಾರಿಹೋಕರ ಜೊತೆ ಹುಚ್ಚಾಟ ಆಡುತ್ತಾರೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ಬಣ್ಣದ ಪುಂಡರ ಹಾವಳಿಗೇನು ಕಡಿಮೆಯಿಲ್ಲ.
ಕೆಲವೊಮ್ಮೆ ಎಲ್ಲಿಂದ ಹೊಡೆತ ಬರುತ್ತದೆ ಎಂದು ಹೇಳುವುದು ಅಸಾಧ್ಯ. ಹೋಳಿಯ ದಿನ ಬಣ್ಣದ ನೀರಿನ ಬಲೂನುಗಳನ್ನು ಮಾತ್ರವೇ ಅಲ್ಲ, ಮೊಟ್ಟೆ, ಕಸ, ಅಮೇಧ್ಯಗಳನ್ನು ಎಸೆಯುವವರೂ ಇದ್ದಾರೆ. ಇವುಗಳಿಂದ ಹೆಚ್ಚಿನ ಅಪಾಯ ಇಲ್ಲ. ಆದರೆ, ಕುತ್ತಿತ ಮೋಜಿಗಾಗಿ ಟಾರ್, ಗ್ರೀಸ್, ಕಲ್ಲು, ಕಲ್ಲೆಣ್ಣೆ ಎಸೆಯುವವರೂ ಇದ್ದಾರೆ.
ಹೋಳಿಯ ಬಣ್ಣಗಳು ಸುರಕ್ಷಿತವಲ್ಲ. ಮನೆಯಲ್ಲೇ ತಯಾರಿಸಿದ ಬಣ್ಣಗಳನ್ನು ಬಳಸುವುದು ಉತ್ತಮ. ಪ್ರಾಕೃತಿಕ ಬಣ್ಣಗಳನ್ನೇ ಖರೀದಿಸಿ. ಕೆಂಪು ಮತ್ತು ಗುಲಾಬಿ ಬಣ್ಣಗಳು ನೋಡಲು ಆಕರ್ಷಕ, ಬೇಗನೆ ತೊಳೆದು ಹೋಗುತ್ತವೆ. ಆದರೆ ನೇರಳೆ, ಹಸುರು, ಹಳದಿ, ಕಿತ್ತಳೆ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿವೆ. ಇವುಗಳಿಂದ ದೂರ ಇರಿ ಎನ್ನುವುದು ತಜ್ಞ ವೈದ್ಯರ ಸಲಹೆ.
ಕರ್ನಾಟಕದಲ್ಲಿ ಕಾಮನ ಹಬ್ಬ
ಕರ್ನಾಟಕದಲ್ಲಿ ಹೋಳಿಗೆ ʻಕಾಮನ ಹಬ್ಬ’ ಎಂದು ಹೆಸರು. ಕಾಮನೆಗಳನ್ನು ಬೆಂಕಿಯಲ್ಲಿ ಸುಟ್ಟು ಭಗವಂತನ ಧ್ಯಾನ ಮಾಡಬೇಕಾದ ದಿನ ಇದು. ಆದರೆ, ಸಂಪ್ರದಾಯಕ್ಕಿಂತ ಹೆಚ್ಚಾಗಿ ಮನೋರಂಜನೆಯ ಹಬ್ಬ ಇದಾಗಿದೆ. ಹೆಚ್ಚಾಗಿ ಗಂಡುಮಕ್ಕಳು ಮನೆಮನೆಗೆ ಹೋಗಿ ಹಣ, ಕಟ್ಟಿಗೆ ಮತ್ತು ಬೆರಣಿ ಸಂಗ್ರಹಿಸುತ್ತಾರೆ. ಉರುವಲುಗಳನ್ನು ಒಂದೆಡೆ ರಾಶಿ ಹಾಕಿ ಉರಿಸುತ್ತಾರೆ. ನೆರೆಮನೆಗಳಿಂದ ಇದನ್ನು ಕದ್ದುಕೊಂಡು ಬರುವುದೇ ಒಂದು ಗಮ್ಮತ್ತು. ಇದನ್ನೆಲ್ಲ ರಾಶಿ ಹಾಕಿ ರಾತ್ರಿ ದೊಡ್ಡದಾಗಿ ಬೆಂಕಿ ಉರಿಸುತ್ತಾರೆ. ʻಕಾಮನ ಕಟ್ಟಿಗೆ, ಭೀಮನ ಬೆರಣಿʼ ಎಂದು ಹಾಡುತ್ತಾರೆ. ಮನೆ ಮನೆಗಳಲ್ಲಿ ಹೆಂಗಸರು ಕಾಮದೇವನಿಗಾಗಿ ಹೋಳಿಗೆ ತಯಾರಿಸುತ್ತಾರೆ. ಇದನ್ನು ಬೆಂಕಿ ಕುಂಡದಲ್ಲಿ ಕಾಮದೇವನಿಗೆ ಅರ್ಪಿಸುತ್ತಾರೆ.
ಒಟ್ಟಿನಲ್ಲಿ ಪ್ರತಿ ವರ್ಷ ಬರುವ ಈ ಹೋಳಿ ಎಲ್ಲೆ ಮೀರದಿರಲಿ ಎನ್ನುವುದೇ ಎಲ್ಲರ ಆಶಯ.