ಉಡುಪಿ: ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಟ್ಟರು. ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಎನ್ನುವ ಮೂಲಕ ಭಾಷಣ ಆರಂಭಿಸಿದರು.
ಮೋದಿ ಜೊತೆ ರಾಹುಲ್ ಹೋಲಿಕೆ ಮಾಡುವುದೇ ತಪ್ಪು. ರಕ್ಷಣೆ ವಿಷಯದಲ್ಲಿ ದೇಶ ಗೌರವಪಡುವಂತೆ ನಡೆದುಕೊಂಡಿದ್ದೇವೆ. ಪುಲ್ವಾಮ ಘಟನೆಯಿಂದ ಭಾರತ ತತ್ತರಿಸಿ ಹೋಗಿತ್ತು. 12 ದಿನದಲ್ಲಿ ನಮ್ಮ ಕೆಲಸ ಮಾಡಿ ತೋರಿಸಿದ್ದೇವೆ. ಪುಲ್ವಾಮದಂತೆ ಇನ್ನೂ ಅನೇಕ ಆತ್ಮಹತ್ಯೆ ದಾಳಿ ಎಸಗುವ ಸೂಚನೆ ಇತ್ತು. ಹಾಗಾಗಿ ಅವರನ್ನು ತಡೆಯಲು ಕಾರ್ಯಾಚರಣೆ ಮಾಡಲೇಬೇಕಿತ್ತು ಎಂದು ಏರ್ ಸ್ಟ್ರೈಕ್ ಸಮರ್ಥಿಸಿದರು.
ಬೆಲೆ ಏರಿಕೆ ನಿಯಂತ್ರಣಕ್ಕೆ ತಂದಿದ್ದೇವೆ. ಭ್ರಷ್ಟಾಚಾರದ ಆರೋಪವಂತೂ ಇಲ್ಲವೇ ಇಲ್ಲ. ಬಡವರಿಗಾಗಿ ನಿರಂತರ ಹೊಸ ಕಾರ್ಯಕ್ರಮ ನೀಡಿದ್ದೇವೆ. ಕಾಂಗ್ರೆಸ್ ಬಡತನವನ್ನು ದೇಶದಲ್ಲಿ ಜೀವಂತವಾಗಿರಿಸಿತು. ಚುನಾವಣೆ ಬಂದಾಗ ಬಡತನ ನಿರ್ಮೂಲನೆಯ ಮಾತನಾಡುತ್ತಾ ಬಂತು. ಮಹಾಘಟ ಬಂಧನ್ ಮೋದಿಯನ್ನು ಕೆಳಗಿಳಿಸಲು ಹವಣಿಸುತ್ತಿದೆ. ಪ್ರಧಾನಿ ಹುದ್ದೆಗೆ ಗೌರವ ನೀಡಲು ಬರದ ರಾಹುಲ್ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಛೇಡಿಸಿದರು.
ಸುಮ್ಮನಿದ್ದರೆ ದೇಶ ನಮ್ಮನ್ನು ಕ್ಷಮಿಸುತ್ತಿರಲಿಲ್ಲ. ಭಯೋತ್ಪಾಧನಾ ಕೇಂದ್ರವನ್ನೇ ಧ್ವಂಸ ಮಾಡಿದ್ದೇವು. ಪಾಕಿಸ್ತಾನಕ್ಕೆ ಆಗದ್ದನ್ನು ಮೋದಿ ಮಾಡಿ ತೊರಿಸಿದ್ದಾರೆ. ಭಯೋತ್ಪಾದನೆ ಸಹಿಸಲು ಸಾಧ್ಯವೇ ಇಲ್ಲ ಎನ್ನುವ ಸಂದೇಶ ರವಾನೆಯಾಗಿದೆ ಎಂದು ಹೇಳಿದರು. ಸೇನೆಗೆ ಸ್ವಾತಂತ್ರ್ಯ ನೀಡಿದ್ದೇವೆ. ಮುಂಬೈ ಅಟ್ಯಾಕ್ ಆದಾಗ ಕಾಂಗ್ರೆಸ್ ಧೈರ್ಯ ತೋರಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಕುಟುಕಿದರು.
ಸೇನಾ ಮುಖ್ಯಸ್ಥರನ್ನೇ ಬೀದಿಯ ಗೂಂಡಾ ಅಂತಾರೆ. ಮೋಯ್ಲಿ ಸೈನ್ಯದ ಮುಖ್ಯಸ್ಥರನ್ನು ಸುಳ್ಳು ಎಂದು ಹೇಳುತ್ತಾರೆ. ಮಣಿ ಶಂಕರ್ ಅಯ್ಯರ್ ಪಾಕಿಸ್ತಾನದ ನೆರವು ಕೇಳ್ತಾರೆ. ಪಾಕ್ ಪ್ರಧಾನಿಗೆ ನೋಬೆಲ್ ಕೊಡಬೇಕು ಎನ್ನುವವರು ಕಾಂಗ್ರೆಸ್ ನಲ್ಲಿದ್ದಾರೆ. ಇಂತಹ ಕಾಂಗ್ರೆಸ್ ನಿಂದ ದೇಶ ಉದ್ಧಾರ ಆಗಲ್ಲ ಎಂದು ಹೇಳಿದರು.