ಮುಂಬೈ: ಯಾವುದೇ ರಾಜಕೀಯ ಪಕ್ಷಕ್ಕೂ ರಾಮ ಸೇರಿಲ್ಲ. ರಾಜಕೀಯಕ್ಕಾಗಿ ರಾಮನನ್ನು ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಾವೆಲ್ಲ ಸನ್ಯಾಸಿಗಳು ಒಗ್ಗೂಡಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಡಬೇಕು ಎಂದು ಯೋಗ ಗುರು ಬಾಬಾ ರಾಮ್ದೇವ್ ಕರೆಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನು ಕೇವಲ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ರಾಮ ಇಡೀ ದೇಶಕ್ಕೆ ಸೇರಿದವನು. ಆದ್ದರಿಂದ ಎಲ್ಲಾ ಸಾಧು ಸಂತರು ಕೂಡ ಜೊತೆಗೂಡಿ ರಾಮನ ಮೇಲಿರುವ ಭಕ್ತಿಯನ್ನು ಸಾರಬೇಕು. ದೇಶಕ್ಕೆ ಯಾವುದೇ ತಪ್ಪು ಪರಿಲ್ಪನೆಯನ್ನು ನೀಡುವ ರೀತಿ ನಮ್ಮ ಭಕ್ತಿ ಇರಬಾರದು ಎಂದು ಕಿಡಿಕಾರಿದ್ದಾರೆ.
ಒಂದು ವೇಳೆ ಸಂತರು ಹಾಗೂ ಸನ್ಯಾಸಿಗಳು ಒಗ್ಗೂಡಿ ಪ್ರಾಮಾಣಿಕತೆಯಿಂದ ಇರದಿದ್ದರೆ ದೇಶದಲ್ಲಿ ಏಕತೆ ಹಾಗೂ ಸಮಗ್ರತೆಯನ್ನು ಹೇಗೆ ಕಾಯ್ದುಕೊಳ್ಳಲು ಸಾಧ್ಯ? ರಾಮನ ಹೆಸರನ್ನು ಬಳಸಿಕೊಂಡು ದೇಶವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ನಾನು ಎಲ್ಲಾ ಸನ್ಯಾಸಿಗಳು ಹಾಗೂ ಸಂತರ ಬಳಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡರು.
ಕೆಲ ಸನ್ಯಾಸಿಗಳು ಹಾಗೂ ಪ್ರಜೆಗಳು ರಾಮ ಮಂದಿರವನ್ನು ಆದಷ್ಟು ಬೇಗ ಅಯೋಧ್ಯೆಯಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದ್ರೆ ಜನವರಿ 30ರಂದು ಸನ್ಯಾಸಿಗಳು ಹಾಗೂ ಸಂತರು ಸಂಘಟಿತಗೊಂಡಾಗ ರಾಮಮಂದಿರ ನಿರ್ಮಾಣದ ಕಾರ್ಯ ಫೆಬ್ರವರಿ 21ಕ್ಕೆ ಆರಂಭವಾಗಲಿದೆ ಎಂದು ತಿಳಿಸಿದ್ದರು.
ಜನವರಿ 29ರಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ವಿವಾದದಲ್ಲಿರುವ ಅಯೋಧ್ಯೆಯ ಜಾಗವನ್ನು ಹೊರತುಪಡಿಸಿ ಇನ್ನುಳಿದ ಸ್ಥಳವನ್ನು ರಾಮ ಮಂದಿರ ಪುನರ್ ನಿರ್ಮಿಸಲು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv