ದಾವಣಗೆರೆ: ರಾಜ್ಯದ ವಿವಿದೆಡೆ ಮಳೆ ಸುರಿಯುತ್ತಿದ್ದು. ಕೆರೆ ಕಟ್ಟೆಗಳು ತುಂಬಿದ್ದು ಡ್ಯಾಂಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಆದರೆ ದಾವಣಗೆರೆಯ ಸುತ್ತಮುತ್ತಲೂ ಮಳೆಯ ಛಾಯೆ ಇಲ್ಲ. ಹಾಗಾಗಿ ಗ್ರಾಮಸ್ಥರು ಮೂಢನಂಬಿಕೆಯ ಮೊರೆ ಹೋಗಿ ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ.
ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರದೇಶದಲ್ಲಿ ಕತ್ತೆಗಳ ಮದುವೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಳೆ ಸುಳಿವಿಲ್ಲದ ಕಾರಣ ಮೂಢನಂಬಿಕೆಗಳ ಮೊರೆ ಹೋದ ಗ್ರಾಮಸ್ಥರು, ವರುಣದೇವ ಮುನಿಕೊಂಡಿದ್ದಾನೆ. ಕತ್ತೆಗಳಿಗೆ ಮದುವೆ ಮಾಡಿದರೆ ವರುಣ ದೇವ ಕೃಪೆ ತೋರಿ ರೈತರ ಮೇಲೆ ಕರುಣಿಸುತ್ತಾನೆ ಎನ್ನುವ ನಂಬಿಕೆಯನ್ನು ಹೊಂದಿದ್ದರು. ಇದರಿಂದ ಗ್ರಾಮದ ರೈತರು ಕತ್ತೆಗಳಿಗೆ ಮದುವೆ ಮಾಡಿಸಿ ಮೆರವಣಿಗೆ ನಡೆಸಿದ್ದಾರೆ.
ಕೈಗೆ ಬಂದ ಫಸಲು ಸಹ ಮಳೆ ಇಲ್ಲದೆ ಒಣಗುತ್ತಿದ್ದು, ಆದಷ್ಟು ಬೇಗ ಮಳೆ ಬಂದರೆ ರೈತರ ಬೆಳೆಗಳು ಉಳಿಯುತ್ತವೆ. ಅದಕ್ಕೆ ವರುಣದೇವಾ ಕರುಣೆ ತೋರಲಿ ಎಂದು ರೈತರು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು.