ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಬಳಿಕ ಎಲ್ಲ ದೇಶಿಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ನಾಳೆ ಮಧ್ಯರಾತ್ರಿ ಹನ್ನೆರಡು ಗಂಟೆಯಿಂದ ಈ ಆದೇಶ ಜಾರಿ ಬರಲಿದೆ.
ನಾಳೆ ಮಧ್ಯರಾತ್ರಿಯಿಂದ ವಿಮಾನಗಳ ಹಾರಾಟ ನಿಷೇಧಿಸುವಂತೆ ಎಲ್ಲ ವಾಣಿಜ್ಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ವಿಮಾನಯಾನ ಸಚಿವಾಲಯದಿಂದ ನಿರ್ದೇಶನ ನೀಡಲಾಗಿದ್ದು, ಬುಧವಾರದಿಂದ ಎಲ್ಲ ರಾಜ್ಯಗಳ ವಾಯು ಗಡಿ ಬಂದ್ ಆಗಲಿದೆ. ಕೇವಲ ಕಾರ್ಗೋ ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಅಂತರರಾಷ್ಟ್ರೀಯ ವಿಮಾನಗಳ ಬಂದ್ ಬಳಿಕ ದೆಹಲಿಯಲ್ಲಿ ದೇಶಿಯ ವಿಮಾನಗಳ ಹಾರಾಟ ಬಂದ್ ಮಾಡಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಆದರೆ ಈ ಸಂಬಂಧ ಪ್ರತಿಕ್ರಿಯಿಸಿದ್ದ ವಿಮಾನಯಾನ ಸಚಿವಾಲಯ ಬಂದ್ ಸಾಧ್ಯವಿಲ್ಲ ಎಂದಿತ್ತು.
ದೇಶಿಯ ವಿಮಾನಗಳ ನಿಷೇಧ ಮಾಡುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು ರಾಜ್ಯಗಳಲ್ಲಿ ಬಸ್ ಮತ್ತು ರೈಲು ಸಂಚಾರ ಬಂದ್ ಮಾಡಲಾಗಿದ್ದು, ದೇಶಿಯ ವಿಮಾನ ಬಂದ್ ಮಾಡದಿರುವುದು ಕ್ಯಾರೈಂಟೈನ್ ನಿಮಯದ ಉಲ್ಲಂಘನೆ ಎಂದಿದ್ದರು.
ದೇಶದಲ್ಲಿ 19 ರಾಜ್ಯಗಳು ಸಂಪೂರ್ಣ ಲಾಕ್ ಡೌನ್ ಆಗಿದ್ದು, ರೈಲು ಸೇವೆ ಕೂಡಾ ಬಂದ್ ಆಗಿರುವ ಕಾರಣ ಜನರು ವಿಮಾನಗಳ ಮೂಲಕ ಪ್ರಯಾಣ ನಡೆಸಬಹುದು. ಈ ವೇಳೆಯೂ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಿಯ ವಿಮಾನಗಳ ಹಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.