ಬೆಂಗಳೂರು: ಇಂದು ಟಗುರು ಡಾಲಿಯ ಹುಟ್ಟುಹಬ್ಬವಾಗಿದ್ದು, ಧನಂಜಯ್ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ನಿನ್ನೆ ರಾತ್ರಿಯೇ ನೂರಾರು ಅಭಿಮಾನಿಗಳು ಸೇರಿ ಡಾಲಿ ಹುಟ್ಟುಹಬ್ಬವನ್ನು ಆಚರಿಸೋ ಪ್ಲಾನ್ ಕೂಡ ಮಾಡಿದರು. ಆದರೆ ಧನಂಜಯ್ ಮಾತ್ರ ಹುಟ್ಟುಹಬ್ಬದ ಅಡಂಭರಕ್ಕೆ ಬ್ರೇಕ್ ಹಾಕಿ ಹುಟ್ಟುಹಬ್ಬವನ್ನು ನೆರೆಪೀಡಿತ ಕೊಡಗು ಜನರ ನೆರವಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಜಯನಗರ ಬಳಿ ಇರುವ ಶಾಲಿನಿ ಮೈದಾನದಲ್ಲಿ ಧನಂಜಯ್ ಅವರ ನೂರಾರು ಅಭಿಮಾನಿಗಳು ಧಾವಿಸಿ ಶುಭ ಕೋರಿದಲ್ಲದೆ, ಕೈಲಾದ ದೇಣಿಗೆಯನ್ನು ನೀಡಿದರು. ಸೆಲ್ಫೀಗೊಂದಕ್ಕೆ ಕಾಣಿಕೆ ಎಂಬಂತೆ ಧನ ಸಂಗ್ರಹಣೆ ಕಾರ್ಯ ಮಾಡಿದ ನಟ ಧನಂಜಯ್ ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ ಅವರಿಗೆ ನಾನು ಸಹ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಇತ್ತೀಚಿಗೆ ರವಿಚಂದ್ರನ್, ಕೊಡಗು ಪ್ರವಾಹ ಸಂತ್ರಸ್ತರಿಗೆ ನಾಡಿನ ಜನರು ನೆರವಾಗುತ್ತಿದ್ದಾರೆ ನಿಜ. ಊಟ, ತಿಂಡಿ ಕೊಟ್ಟು ತಾತ್ಕಾಲಿಕವಾಗಿ ನೆರವಾಗೋದಷ್ಟೇ ಅಲ್ಲದೇ ಕೊಡಗನ್ನು ಮರು ನಿರ್ಮಾಣ ಮಾಡೋದು ಹೇಗೆ ಅಂತ ಸ್ವಲ್ಪ ಯೋಚನೆ ಮಾಡಬೇಕಾಗುತ್ತೆ. ಸರ್ಕಾರ ನೆರವಾಗುತ್ತೆ ಅಂತ ಕಾಯುತ್ತಾ ಕುಳಿತುಕೊಳ್ಳುವುದು ಬೇಡ. ನಾವೇ ಸರ್ಕಾರದ ರೀತಿ ಕೆಲಸ ಮಾಡೋಣ ಎಂದು ಹೇಳಿದರು.
ಈ ವೇಳೆ ನಟ ಧನಂಜಯ್ ಮಾಧ್ಯಮಗಳೊಂದಿಗೆ ಮಾತನಾಡಿ, ನಟ ರವಿಚಂದ್ರನ್ ಅವರು ಹೇಳಿರುವ ಕೊಡಗು ಮರು ನಿರ್ಮಾಣದ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಕಾರ್ಯಕ್ಕೆ ನಾವು ಕೂಡ ಸಾಥ್ ಕೊಡುತ್ತೀವಿ ಎಂದು ಹೇಳಿದರು.
ತಮ್ಮ ಹುಟ್ಟುಹಬ್ಬದ ಕುರಿತು ಧನಂಜಯ್ ಅವರು ತಮ್ಮ ಫೇಸ್ಬುಕ್ನಲ್ಲಿ ಒಂದು ವಿಡಿಯೋವನ್ನು ಹಾಕಿದ್ದರು. ಅದರಲ್ಲಿ `ಎಲ್ಲರಿಗೂ ನಮಸ್ಕಾರ, ನಾನು ಸುಮಾರು ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನೋಡಿತ್ತಿದ್ದೇನೆ. ಅಭಿಮಾನಿಗಳು 22 ರಾತ್ರಿ ಹಾಗೂ 23ರಂದು ಡಾಲಿ ಡೇ ಎಂದು ಆಚರಿಸಲು ರೆಡಿ ಆಗುತ್ತಿದ್ದೀರಾ. ಆದರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ. ನನ್ನ ಹುಟ್ಟುಹಬ್ಬ ಆಚರಿಸಲು ನೀವು ಕಾತುರರಾಗಿದ್ದೀರಾ ಹಾಗೂ ಖುಷಿಯಾಗಿದ್ದೀರಾ ಎಂದು ಗೊತ್ತಾಗುತ್ತದೆ. ನಿಮ್ಮ ಅಭಿಮಾನ ನನಗೆ ದೊಡ್ಡದ್ದು. ಆದರೆ ಈ ದಿನ ಕೇರಳ ಹಾಗೂ ಕೊಡಗಿನಲ್ಲಿ ಆಗುತ್ತಿರುವುದು ನೋಡುತ್ತಿದ್ದೀರಾ. ಇತಂಹ ಪರಿಸ್ಥಿತಿಯಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಅಲ್ಲದೇ ನಾನು ಹುಟ್ಟುಹಬ್ಬ ಆಚರಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯ ಮಾಡುವಂತಹ ಸಮಯ’ ಎಂದು ತಿಳಿಸಿದ್ದರು.
`ಡಾಲಿ ಡೇ ದಿನಕ್ಕೆ ನೀವು ಅರ್ಥ ಕೊಡಬೇಕಾದರೆ ನನ್ನನ್ನು ಭೇಟಿ ಮಾಡಬಹುದು. ಆದರೆ ಆ ದಿನ ನಿಮ್ಮ ಕೈಲಾದಷ್ಟು ಅಂದರೆ 5 ರೂ., 10 ರೂ. ನೀಡಬಹುದು. ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಪಟಾಕಿಯಲ್ಲಿ ಹಣ ವ್ಯರ್ಥ ಆಗುವುದರ ಬದಲು ಇತಂಹ ಕೆಲಸಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ನೀವು ದಾನ ಮಾಡಿ, ನನ್ನ ಕೈಲಾದಷ್ಟು ನಾನು ದಾನ ಮಾಡುತ್ತೇನೆ. ಒಂದು ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸೋಣ’ ಎಂದು ಧನಂಜಯ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv