ಚಿಕ್ಕಬಳ್ಳಾಪುರ: ಮನೆ ಬಳಿ ಬಂದ ನಾಗರಹಾವನ್ನೇ ಸಾಕು ನಾಯಿಗಳು ಅಟ್ಟಾಡಿಸಿ ಕೊಂದಿರೋ ಘಟನೆ ಚಿಕ್ಕಬಳ್ಳಾಪುರ ತಾಲೂಕು ನವಿಲುಗುರ್ಕಿ ಗ್ರಾಮದಲ್ಲಿ ನಡೆದಿದೆ.
ದೇವನಹಳ್ಳಿ ತಾಲೂಕಿನ ಪುರ ಗ್ರಾಮದ ರೈತ ಕೃಷ್ಣಪ್ಪರ ನಾಯಿಗಳು ಹಾವನ್ನು ಕಚ್ಚಿ ಕಚ್ಚಿ ಕೊಂದಿವೆ. ಚಿಕ್ಕಬಳ್ಳಾಪುರ ತಾಲೂಕಿನ ನವಿಲುಗುರ್ಕಿ ಗ್ರಾಮದ ಹೊರವಲಯದಲ್ಲಿ ಜಮೀನು ಖರೀದಿಸಿ ದ್ರಾಕ್ಷಿ ತೋಟ ಮಾಡಿದ್ದು, ವಾಸಕ್ಕೆ ಅಂತ ಅಲ್ಲೇ ಮನೆ ಸಹ ಕಟ್ಟಿಕೊಂಡಿದ್ದಾರೆ. ತೋಟದ ಮನೆಯಲ್ಲಿ ವಾಸವಾಗಿರೋ ರೈತ ಕೃಷ್ಣಪ್ಪ ಕಾವಲಿಗೆ ಅಂತ ಬೀದಿ ನಾಯಿಗಳನ್ನ ಸಾಕಿಕೊಂಡಿದ್ದಾರೆ.
ಮನೆಯ ಬಳಿ ನಾಗರಹಾವು ಬಂದಿದ್ದನ್ನು ಕಂಡ ರೈತ ಕೃಷ್ಣಪ್ಪ, ಮನೆ ಕಡೆಯಿಂದ ರಾಗಿ ಹೊಲದ ಕಡೆಗೆ ಓಡಿಸಿದ್ದಾರೆ. ಅಷ್ಟರಲ್ಲೇ ನಾಗರಹಾವನ್ನ ಸುತ್ತುವರಿದ ಸಾಕು ನಾಯಿಗಳು ನಾಗರಹಾವಿನ ಜೊತೆ ಕಾಳಗಕ್ಕಿಳಿದಿವೆ. ಸರಿ ಸಮಾರು 10 ರಿಂದ 15 ನಿಮಿಷಗಳ ಕಾಲ ನಾಗರಹಾವಿನ ಜೊತೆ ಕಾದಾಟ ನಡೆಸಿರುವ ಶ್ವಾನಗಳು ಕೊನೆಗೆ ಕಚ್ಚಿ ಕಚ್ಚಿ ನಾಗರಹಾವನ್ನ ಕೊಂದಿವೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಈ ಹಿಂದೆಯೂ ಹಾವೊಂದು ಮನೆ ಬಳಿ ಬಂದಾಗ ಶ್ವಾನಗಳು ಇದೇ ರೀತಿ ಮಾಡಿದ್ದವು ಅಂತ ರೈತ ಕೃಷ್ಣಪ್ಪ ಪಬ್ಲಿಕ್ ಟಿವಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಬೇಸಿಗೆ ಧಗೆಯ ಕಾರಣ ಹಾವುಗಳ ಕಾಟ ಜಾಸ್ತಿಯಾಗಿದೆ. ಹೀಗಾಗಿ ನಮಗೂ ಎಲ್ಲೋ ಒಂದು ಕಡೆ ಭಯ ಇದ್ರೂ ನಾಯಿಗಳು ನಮ್ಮನ್ನ ಹಾವುಗಳಿಂದ ಕಾಪಾಡುತ್ತಿವೆ ಎಂದು ಹೇಳಿದ್ದಾರೆ.
https://www.youtube.com/watch?v=kcsRMVFe0G0