ಸಾಂದರ್ಭಿಕ ಚಿತ್ರ
ಬೆಳಗಾವಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಚೆನ್ನಾಪುರ್ ಲಂಬಾಣಿ ತಾಂಡದಲ್ಲಿ ನಡೆದಿದೆ.
65 ವರ್ಷದ ಚವಳವ್ವಾ ಲಮಾಣಿ ನಾಯಿ ಹಿಂಡು ದಾಳಿಯಿಂದ ಮೃತಪಟ್ಟಿರುವ ವೃದ್ಧೆ. ಇಂದು ಬೆಳಗ್ಗೆ ಜಮೀನಿಗೆ ಕೆಲಸಕ್ಕೆ ಹೋದಾಗ ಸುಮಾರು ಹತ್ತಕ್ಕೂ ಅಧಿಕ ನಾಯಿಗಳು ಏಕಕಾಲದಲ್ಲಿ ದಾಳಿ ಮಾಡಿವೆ.
ಪ್ರದೇಶದಲ್ಲಿ ಮಳೆಯಾಗಿದ್ದ ಪರಿಣಾಮ ಜಮೀನಿಗೆ ಬೀಜ ಹಾಕಲು ವೃದ್ಧೆ ತೆರಳಿದ್ದರು. ಆದರೆ ಈ ವೇಳೆ ನಾಯಿಯ ಹಿಂಡು ಏಕಾಏಕಿ ದಾಳಿ ನಡೆಸಿದೆ. ನಾಯಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಜಮೀನಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಸ್ಥಳೀಯರು ವೃದ್ಧೆಯನ್ನು ಗಮನಿಸಿದ್ದಾರೆ. ಕೂಡಲೇ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದು, ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.