ಕೊಪ್ಪಳ: ಆಕಳು ಕರುವೊಂದು ಭೂಮಿಗೆ ಬಂದು ಕಣ್ಣು ಬಿಡುವ ಮೊದಲೇ ಬೀದಿ ನಾಯಿಗಳ ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಗಂಗಾವತಿಯ ವಲಯ ಅರಣ್ಯ ಇಲಾಖೆಯ ಕಚೇರಿ ಹಿಂದೆ ಹಸುವೊಂದು ಕರು ಹಾಕುತ್ತಿರುವಾಗಲೇ ಬೀದಿನಾಯಿಗಳು ಕಚ್ಚಿ ತಿಂದಿವೆ.
ನಡೆದಿದ್ದೇನು?: ಬೀದಿ ಆಕಳೊಂದು ನಿರ್ಜನ ಪ್ರದೇಶದಲ್ಲಿ ಕರುವಿಗೆ ಜನ್ಮ ನೀಡುತ್ತಿತ್ತು. ತಾಯಿ ಹಸುವಿನ ಜನನಾಂಗದಿಂದ ಕರುವಿನ ಮುಖ ಹೊರ ಬರುತ್ತಿದ್ದಂತೆಯೇ ಬೀದಿ ನಾಯಿಗಳು ಕಚ್ಚಿ ತಿಂದಿವೆ. ಹೃದಯ ವಿದ್ರಾವಕ ಘಟನೆ ಕಂಡ ಜನರು ಮಮ್ಮಲ ಮರುಗಿದ್ದಾರೆ. ಬೀದಿ ನಾಯಿಗಳು ಕರು ಮಾತ್ರವಲ್ಲದೇ ತಾಯಿ ಹಸುವಿನ ಜನನಾಂಗವನ್ನೂ ಕಚ್ಚಿದ್ದರಿಂದ ಆಕಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ.
ಸ್ಥಳೀಯರು ಹೃದಯ ವಿದ್ರಾವಕ ದೃಶ್ಯ ಕಂಡು ಬೀದಿ ನಾಯಿಗಳನ್ನು ಓಡಿಸಿದ್ದಾರೆ. ಈ ವೇಳೆ ಕರು ಅರ್ಧ ಹೊರ ಬಂದಿದ್ದರೆ ಇನ್ನರ್ಧ ಆಕಳಿನ ದೇಹದಲ್ಲೇ ಉಳಿದಿತ್ತು. ಈ ವೇಳೆ ಸ್ಥಳೀಯರು ಕರುವಿನ ಉಳಿದ ದೇಹವನ್ನು ಹೊರತೆಗೆದಿದ್ದಾರೆ. ಸ್ಥಳೀಯರು ಪಶು ವೈದ್ಯರಿಗೆ ಮಾಹಿತಿ ನೀಡಿದ್ದು, ಸದ್ಯ ಹಸುವಿನ ಸ್ಥಿತಿ ಚಿಂತಾಜನಕವಾಗಿದೆ.