ಬೆಂಗಳೂರು: ಕಳೆದ ಐದು ದಿನಗಳಿಂದ ನಾಯಿಯೊಂದು ಹಗಲು ರಾತ್ರಿಯೆನ್ನದೆ ಅರಳಿಕಟ್ಟೆಯನ್ನು ಸುತ್ತುತ್ತಿರುವ ಅಚ್ಚರಿಯ ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಮಹಿಳೆ ಅಥವಾ ಯುವತಿಯರು ದೇವರಲ್ಲಿ ಬೇಡಿಕೆಯನ್ನಿಟ್ಟು, ಈಡೇರಿಸುವಂತೆ ಬೇಡಿಕೊಂಡು ಅರಳಿಕಟ್ಟೆ ಸುತ್ತುವುದನ್ನ ನೋಡಿದ್ದೇವೆ. ಆದರೆ ಇಲ್ಲಿ ನಾಯಿಯೊಂದು ಆಯ್ಯಪ್ಪಸ್ವಾಮಿ ದೇವಸ್ಥಾನದ ಮುಂದಿರುವ ಅರಳಿಕಟ್ಟೆಯನ್ನು ಐದು ದಿನದಿಂದ ಹಗಲು ರಾತ್ರಿಯೆನ್ನದೆ ಸುತ್ತುತ್ತಿದೆ. ಈ ನಾಯಿ ಐದು ದಿನದಿಂದ ತಿಂಡಿ ಆಹಾರವನ್ನು ಸ್ವೀಕರಿಸದೇ ದಿನದ 24 ಗಂಟೆಯೂ ಮರವನ್ನ ಸುತ್ತುತ್ತಿದೆ. ಈ ಅಚ್ಚರಿಯ ದೃಶ್ಯವನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ.
ಮೊದಲ ಬಾರಿಗೆ ಪ್ರಾಣಿಯೊಂದು ಮರವನ್ನು ಸುತ್ತುತ್ತಿರುವುದನ್ನು ನಾವು ನೋಡುತ್ತಿರುವುದು. ಈ ನಾಯಿಗೆ ದೇವರ ಕರುಣೆ ಇದೆ. ಅದಕ್ಕಾಗಿ ಈ ರೀತಿ ಮರವನ್ನು ಸುತ್ತುತ್ತಿದೆ. ನಾಯಿಯು ಮೊದಲು ಬಿಲ್ವೆಪತ್ರೆ ಮರ ಸುತ್ತಿದ್ದು, ನಂತರ ಬನ್ನಿಮರ ಹಾಗೂ ಅರಳಿಮರವನ್ನು ಸುತ್ತಿ ಕೊನೆಯಲ್ಲಿ ಎಲ್ಲಾ ಮರಗಳನ್ನು ಸುತ್ತುತ್ತಿದೆ. ನಾಯಿಗೆ ತಿಂಡಿ ನೀರು ನೀಡಿದರೂ ಅದು ಏನನ್ನೂ ತಿನ್ನಲಿಲ್ಲ. ಸುಸ್ತಾದರೆ ಸ್ವಲ್ಪ ಕುಳಿತುಕೊಳ್ಳುತ್ತದೆ. ಇಲ್ಲವಾದ್ರೆ ಮರವನ್ನು ಸುತ್ತುತ್ತಲೇ ಇರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
ಶುಕ್ರವಾರದಿಂದ ಕಾರ್ತೀಕ ಪೌರ್ಣಿಮೆ ಇದೆ. ಈ ದೇವಸ್ಥಾನದ ಜಾಗದಲ್ಲಿ ಒಂದು ಶಕ್ತಿ ಇರಬಹುದು. ನಾಯಿ ಮರ ಸುತ್ತುವುದು ಜನರ ಗಮನಕ್ಕೆ ಬಂದಿರಲಿಲ್ಲ. ಶುಕ್ರವಾರ ಮಧ್ಯಾಹ್ನದಿಂದ ಬಿಸ್ಕೆಟ್, ಹಾಲು, ನೀರು ಕೊಟ್ಟರೂ ಅದು ತಿನ್ನುತ್ತಿಲ್ಲ. ಇಲ್ಲಿ ಸುಮಾರು 30 ವರ್ಷಗಳಿಂದ ಅಯ್ಯಪ್ಪನ ಸನ್ನಧಿ ಇದೆ. ಶಬರಿಮಲೆಯಲ್ಲಿ ಯಾವ ರೀತಿ ಪೂಜೆ ನಡೆಯುವುದೋ ಅದೇ ತೆರನಾಗಿ ಇಲ್ಲಿಯೂ ನಡೆಯುತ್ತದೆ. ಈ ನಾಯಿಗೂ ಇಲ್ಲಿಗೂ ಒಂದು ನಿಕಟ ಸಂಬಂಧ ಇದೆ. ಅದರ ಪೂವರ್ಜರು ಇಲ್ಲಿ ಇದ್ದಿರಬಹುದು. ಇಲ್ಲಿ ದೇವಸ್ಥಾನವನ್ನು ಕಟ್ಟಿದವರಿರಬಹುದು. ಇನ್ನೂ ಬಾಕಿ ಇರುವ ಸೇವೆಯನ್ನು ಈ ನಾಯಿ ರೂಪದಲ್ಲಿ ಬಂದು ಸಲ್ಲಿಸುತ್ತಿರಬಹುದು ಎಂದು ದೇವಸ್ಥಾನದ ಪೂಜಾರಿ ಪ್ರಶಾಂತ್ ಭಟ್ ಹೇಳಿದ್ರು.
https://www.youtube.com/watch?v=mhlZrzCtG98