ಬೆಂಗಳೂರು: ನಾಯಿಯಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಬೆಂಗಳೂರಿನ ರಾಜಾರಾಜೇಶ್ವರಿನಗರ ಸಾಯಿ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಖಾಸಗಿ ಕ್ಲಬ್ವೊಂದರಲ್ಲಿ ಟೆನ್ನಿಸ್ ಕೋಚ್ ಆಗಿ ಕೆಲಸ ಮಾಡುವ ದೀಪಕ್ ಮತ್ತು ಸ್ನೇಹಿತ ಗಗನ್ ರಾತ್ರಿ ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್ನಲ್ಲಿ ಹೋಗಿದ್ದರು. ಈ ವೇಳೆ ಪೆಟ್ರೋಲ್ ಬಂಕ್ಗೆ ಹೋಗುವ ದಾರಿಯಲ್ಲಿ ಬೀದಿ ನಾಯಿಯೊಂದು ರಸ್ತೆಗೆ ಅಡ್ಡಲಾಗಿ ಮಲಗಿತ್ತು.
ನಾಯಿಯನ್ನು ನೋಡಿದ ದೀಪಕ್ ಅದನ್ನು ಪಕ್ಕಕ್ಕೆ ಹೋಗುವಂತೆ ಗದರುತ್ತಿದ್ದ ವೇಳೆ ಅದೇ ದಾರಿಯಲ್ಲಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಯಿ ಮೇಲೆ ಯಾಕೆ ಗಲಾಟೆ ಮಾಡ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಕೇಳಿದ ದೀಪಕ್ ನಾವು ಗಲಾಟೆ ಮಾಡುತ್ತಿಲ್ಲ ನಾಯಿಯನ್ನು ಪಕ್ಕಕ್ಕೆ ಹೋಗುವಂತೆ ಬೆದರಿಸುತ್ತಿದ್ದೇವೆ ಎಂದು ಹೇಳಿದ್ದರು.
ಇದೇ ವಿಚಾರಕ್ಕೆ ನಾಲ್ವರ ಮಧ್ಯೆ ಗಲಾಟೆ ಆಗಿ ಕಾರಿನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಟೆನ್ನಿಸ್ ಕೋಚ್ ದೀಪಕ್ ಮತ್ತು ಸ್ನೇಹಿತ ಗಗನ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಾದ ಗಗನ್ ತಮ್ಮ ಸ್ನೇಹಿತರಾದ ಮಧು, ಶಾನು ಎಂಬವರಿಗೆ ಫೋನ್ ಮಾಡಿ ಸಹಾಯಕ್ಕೆ ಕರೆದಿದ್ದರು.
ಗಲಾಟೆ ಸ್ಥಳಕ್ಕೆ ಬಂದ ಮಧು, ಶಾನು ಕೂಡ ಕಾರಿನಲ್ಲಿದ್ದ ಇಬ್ಬರು ಅಪರಿಚಿತರ ಮೇಲೆ ಮರದ ದಿಮ್ಮಿಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೀದಿ ನಾಯಿಯ ಕ್ಷಲ್ಲಕ ವಿಚಾರಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.