ಬೆಂಗಳೂರು: ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿದಕ್ಕೆ ಕಾರಿನ ಮಾಲೀಕ ವಯೋ ವೃದ್ಧರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬಾಣಸವಾಡಿಯಲ್ಲಿ ಈ ಘಟನೆ ನಡೆದಿದ್ದು, ಕಾರು ಮಾಲೀಕ ಚಾರ್ಲ್ಸ್, ನಾಯಿಯನ್ನು ಸಾಕಿದ್ದ ಗೇರಿ ರೋಜಾರಿಯೋ ಎಂಬ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾನೆ. ಭಾನುವಾರ ರಾತ್ರಿ 11 ಗಂಟೆಗೆ ಗೇರಿ ರೋಜಾರಿಯೋ ನಾಯಿಯನ್ನು ಹೊರಗಡೆ ಬಿಟ್ಟಿದ್ದಾರೆ. ಈ ವೇಳೆ ನಾಯಿ ಎದುರುಗಡೆ ರಸ್ತೆಯ ಚಾರ್ಲ್ಸ್ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಇದನ್ನೂ ಓದಿ: ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿ ಹೊಡೆದು ಕೊಂದ
ನಾಯಿ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಚಾರವಾಗಿ ಎರಡು ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇಷ್ಟಕ್ಕೆ ರೊಚ್ಚಿಗೆದ್ದ ಕಾರು ಮಾಲೀಕ ಚಾರ್ಲ್ಸ್ ಎರಡನೇ ಮಹಡಿಯಿಂದ ಕಲ್ಲು ತಗೆದು ವಯೋವೃದ್ಧ ಗೇರಿ ರೋಜಾರಿಯೋಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗೇರಿ ರೋಜಾರಿಯೋ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕಲ್ಲು ಬಿದ್ದ ರಭಸಕ್ಕೆ ಗೇರಿ ರೋಜಾರಿಯ ಎರಡು ಹಲ್ಲುಗಳು ಮುರಿದಿದ್ದು, ಕಣ್ಣುಗಳು ಮಂಜಾಗಿ ಕಾಣುತ್ತಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಮಳೆ ಎಚ್ಚರಿಕೆ – ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ
ಈ ಕುರಿತಂತೆ ಗೇರಿ ರೋಜಾರಿಯೋ ಅವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಚಾರ್ಲ್ಸ್ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ.