ಬೆಂಗಳೂರು: ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಕೇಶವನಾರಾಯಣ ಆಯೋಗದಿಂದ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ವರದಿ ಸಲ್ಲಿಕೆಯಾಗಿದ್ದು, ಕೆಜೆ ಜಾರ್ಜ್ಗೆ ಕ್ಲೀನ್ ಚಿಟ್ ಸಿಕ್ಕಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.
ಪ್ರಮುಖ ಆರೋಪ ಎದುರಿಸುತ್ತಿದ್ದ ಮಾಜಿ ಗೃಹ ಸಚಿವ, ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಜೆ.ಜಾರ್ಜ್ ಅವರನ್ನು ಕರೆಯಿಸಿ ತನಿಖೆ ನಡೆಸಿಲ್ಲ. ಇದೊಂದು ಒತ್ತಡದಿಂದ ಮಾಡಿಕೊಂಡಿರುವ ಕೃತ್ಯ ಎಂದು ಆಯೋಗ ಅಭಿಪ್ರಾಯಪಟ್ಟಿದೆ ಎನ್ನುವ ಅಂಶ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ವಿಕಾಸಸೌಧದ ಕಚೇರಿಯಲ್ಲಿ ವರದಿ ಸಲ್ಲಿಕೆ ನಂತರ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನ್ಯಾ. ಕೇಶವನಾರಾಯಣ ಆಯೋಗದ ವರದಿ ನೀಡಿದೆ. ಆಯೋಗ ಒಂದೂವರೆ ವರ್ಷ ಸಮಯ ತೆಗೆದುಕೊಂಡಿದೆ. ಎಸಿಎಸ್ ಅವರಿಗೆ ವರದಿ ನೀಡಲಾಗುತ್ತದೆ. ಅಂತಿಮವಾಗಿ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ನ್ಯಾ.ಕೇಶವ ನಾರಾಯಣ ಮಾತನಾಡಿ, ವರದಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ತೀರ್ಮಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಅವಕಾಶ ಇರುತ್ತದೆ. ಇದು ಒಂದು ಸತ್ಯಶೋಧನೆ ಸಮಿತಿ ರೀತಿಯಲ್ಲಿದೆ. ನಮ್ಮ ಮುಂದೆ ಯಾರು ಆರೋಪಿಗಳು ಇರುವುದಿಲ್ಲ. ಒಟ್ಟು 50 ಸಾಕ್ಷ್ಯಗಳನ್ನು ವಿಚಾರಣೆ ಮಾಡಲಾಗಿದೆ. 320 ಪುಟಗಳ ವರದಿ ನೀಡಲಾಗಿದೆ ಎಂದು ತಿಳಿಸಿದ್ರು.