ಉಡುಪಿ: 60 ವರ್ಷದ ವ್ಯಕ್ತಿಯೊಬ್ಬರ ಕಣ್ಣಿನಿಂದ 15 ಸೆ.ಮೀ ಉದ್ದದ ಹುಳವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರಗೆ ತೆಗೆಯಲಾಗಿದೆ.
ಹಲವು ದಿನಗಳಿಂದ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ, ಕುಂದಾಪುರದ ನ್ಯೂ ಮೆಡಿಕಲ್ ಸೆಂಟರಿನ ನೇತ್ರ ತಜ್ಞರಾದ ಡಾ. ಶ್ರೀಕಾಂತ್ ಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ವೈದ್ಯರು ಕಣ್ಣಿನ ತಪಾಸಣೆ ಮಾಡಿದಾಗ ಬಲಗಣ್ಣಿನ ಒಳಗೆ ಜೀವಂತವಾಗಿ ಹರಿದಾಡುತ್ತಿರುವ ಹುಳವನ್ನು ಪತ್ತೆಹಚ್ಚಿದ್ದಾರೆ.
ಕಣ್ಣಿನ ಒಳಗಿರುವ ಹುಳವನ್ನು ಔಷಧಿಗಳ ಮೂಲಕ ಸಾಯಿಸಿ ತೆಗೆದರೆ ಕಣ್ಣಿನ ಒಳಗೆ ಊತ ಬಂದು ದೃಷ್ಟಿಗೆ ತೊಂದರೆ ಆಗುವ ಸಾಧ್ಯತೆ ಇತ್ತು. ಆ ಹುಳವನ್ನು ಒಂದು ಬದಿಗೆ ಬರುವಂತೆ ಮಾಡಿ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಜೀವಂತ ಹುಳವನ್ನು ತೆಗೆದಿದ್ದಾರೆ.
ಈ ಹುಳು ವುಚೆರಿಯಾ ಬ್ಯಾನ್ಕ್ರಾಫ್ಟಿ ಎನ್ನುವ ಜಾತಿಯದಾಗಿದ್ದು, ಇದು ಸೊಳ್ಳೆಗಳ ಮೂಲಕ ಹರಡುತ್ತದೆ ಎನ್ನಲಾಗಿದೆ. ಸೊಳ್ಳೆಗಳು ಕಚ್ಚಿದಾಗ ಇದರ ಲಾರ್ವಾಗಳು ರಕ್ತದಲ್ಲಿ ಸೇರಿ ಅಲ್ಲೇ ಬೆಳೆದು ಮೊಟ್ಟೆಯನ್ನಿಡುತ್ತವೆ. ಅಪರೂಪಕ್ಕೆ ಈ ಮೊಟ್ಟೆಗಳು ಕಣ್ಣಿನಲ್ಲಿ ಸೇರಿ ಅಲ್ಲೇ ಬೆಳೆದು ಹುಳುವಾಗಿ ಪರಿವರ್ತನೆ ಆಗುವ ಸಾಧ್ಯತೆಗಳಿವೆ. ಹುಳ ತೆಗೆದ ನಂತರ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv