– ಮಗಳಿಗೆ ಡ್ರಗ್ಸ್ ಸೇವಿಸುವಂತೆ ಒತ್ತಾಯ
– ತಂದೆಯಿಂದ ವರದಕ್ಷಿಣೆ ಕಿರುಕುಳ ಆರೋಪ
ನವದೆಹಲಿ: ಮಾಜಿ ಏಮ್ಸ್ ಆಸ್ಪತ್ರೆಯ ವೈದ್ಯೆ ಶವವಾಗಿ ಪತ್ತೆಯಾದ ಘಟನೆ ಗುರುಗ್ರಾಮದ ಅಪಾರ್ಟ್ ಮೆಂಟ್ನಲ್ಲಿ ನಡೆದಿದೆ.
ಶೋನಮ್ ಮೋತಿಸ್ ಮೃತಪಟ್ಟ ವೈದ್ಯೆ. 2017ರಲ್ಲಿ ಶೋನಮ್ ಏಮ್ಸ್ ಆಸ್ಪತ್ರೆಗೆ ಸೇರಿದ್ದರು. ಶೋನಮ್ಗೆ ಆಕೆಯ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಅಲ್ಲದೆ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾರೆ. ಪೊಲೀಸರು ಶೋನಮ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ರಾಜಸ್ಥಾನ ಮೂಲದ ಕೋಟಾ ನಿವಾಸಿಯಾಗಿರುವ ಶೋನಮ್ ತಂದೆ ಓಂಕಾರ್ ಲಾಲ್ ಮೋತಿಸ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಓಂಕಾರ್ ಲಾಲ್, ನನ್ನ ಅಳಿಯ ಶಿಖರ್ ಮೋರ್ ಮಾದಕ ವ್ಯಸನಿಯಾಗಿದ್ದು, ನನ್ನ ಮಗಳ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದನು. ಕಳೆದ ವರ್ಷ ಮೇ 11ರಂದು ಇಬ್ಬರ ಮದುವೆ ನಡೆದಿತ್ತು. ಮದುವೆಯಾದ ಬಳಿಕ ಶಿಖರ್ ಹಾಗೂ ಆತನ ಮನೆಯವರು ನನ್ನ ಮಗಳಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದರು. ಅಲ್ಲದೆ ಶಿಖರ್ ನನ್ನ ಮಗಳಿಗೆ ಡ್ರಗ್ಸ್ ಸೇವಿಸುವಂತೆ ಬಲವಂತ ಮಾಡುತ್ತಿದ್ದನು ಎಂದು ಆರೋಪಿಸಿದ್ದಾರೆ.
ಒಂದು ಸಂದರ್ಭದಲ್ಲಿ ಶಿಖರ್ ನನ್ನ ಮಗಳ ಕಾಲನ್ನು ಮುರಿದು ಹಾಕಿದ್ದ. ನಿರಂತರ ಕಿರುಕುಳದಿಂದ ನನ್ನ ಮಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಸ್ವಸ್ಥಳಾಗಿದ್ದಳು ಎಂದು ತಂದೆ ದೂರಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಪವನ್ ಚೌಧರಿ ಪ್ರತಿಕ್ರಿಯಿಸಿ, ಹಲವಾರು ಮಾತ್ರೆಗಳು ಹಾಗೂ ಇಂಜೆಕ್ಷನ್ಗಳು ಶೋಹನ್ ದೇಹದ ಬಳಿ ಹರಡಿಕೊಂಡಿವೆ. ಆಕೆ ಹೆಚ್ಚು ಪ್ರಮಾಣದ ಅರಿವಳಿಕೆಗಳನ್ನು ತೆಗೆದುಕೊಂಡಿರಬಬಹುದು ಎಂದು ಹೇಳಿದ್ದಾರೆ.
ಸಾವಿನ ಹಿಂದಿನ ನಿಜವಾದ ಕಾರಣ ತಿಳಿಯಲು ವೈದ್ಯರು ಸ್ಯಾಂಪಲ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸೋಮವಾರ ಬೆಳಗ್ಗೆ ಪೋಷಕರು ಶೋನಮ್ಗೆ ಕರೆ ಮಾಡಿದ್ದಾರೆ. ಆದರೆ ಆಕೆ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಅವರ ತಂದೆ ಭದ್ರತಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ನಿಮ್ಮ ಮಗಳು ಬೆಳಗ್ಗೆಯಿಂದ ಮನೆಯಿಂದ ಹೊರ ಬಂದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ಆಕೆಯ ಅಪಾರ್ಟ್ ಮೆಂಟ್ ಬಳಿ ಬಂದಾಗ ಮೃತದೇಹ ಪತ್ತೆಯಾಗಿದೆ.
ಮೃತದೇಹ ಪತ್ತೆ ಆಗುತ್ತಿದ್ದಂತೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದವರೆಗೆ ಶೋನಮ್ ನಮ್ಮ ಜೊತೆ ಕೋಟಾದಲ್ಲಿ ವಾಸಿಸುತ್ತಿದ್ದಳು. ನಂತರ ಆಕೆ ದೆಹಲಿಗೆ ಹೋದಾಗ ಶಿಖರ್ ಆಕೆಯನ್ನು ಸ್ವೀಕರಿಸಲಿಲ್ಲ. ಸೆಪ್ಟೆಂಬರ್ ನಲ್ಲಿ ಶೋನಮ್ ಏಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಗುರುಗ್ರಾಮ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಅವಳು ಒಂದು ವಾರದಲ್ಲಿಯೇ ಹುದ್ದೆಗೆ ರಾಜೀನಾಮೆ ನೀಡಿ ಗುರುಗ್ರಾಮದಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಂದೆ ಓಂಕಾರ್ ಲಾಲ್ ತಿಳಿಸಿದ್ದಾರೆ.
ಈ ಬಗ್ಗೆ ಗುರುಗ್ರಾಮದ ಪೊಲೀಸರು ಶುಶಾಂತ್ ಲೋಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಡೆತ್ನೋಟ್ ಸಿಕ್ಕಿಲ್ಲ. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ.