ರಾಮನಗರ: ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಜಬ್ ವಿವಾದ ಹಿನ್ನೆಲೆ ಕಲ್ಲು ತೂರಾಟ ಪ್ರಕರಣ ಕುರಿತು ರಾಮನಗರದ ಮಿನಿವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆ ಬಗೆಹರಿಸುವ ಕಮಿಟ್ಮೆಂಟ್ ಇಲ್ಲ. ರಾಜ್ಯದಲ್ಲಿ ಶಾಂತಿಯುತ ವಾತಾವರಣ ಇತ್ತು. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ರೀತಿ ಇತ್ತು. ಆದರೆ ಅದನ್ನ ಹಾಳು ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಧಮ್ ಇದ್ರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ- ಶಾಸಕಿಗೆ ಈಶ್ವರಪ್ಪ ಸವಾಲು
ಬಡವರ ಪರವಾಗಿ ಹೋರಾಟ ಮಾಡಿ, ಇದನ್ನು ನಾನು ಎಲ್ಲ ಸಮಾಜದವರಿಗೂ ಹೇಳ್ತೇನೆ. ಉಡುಪಿ ಹಿಂದೂ – ಮುಸ್ಲಿಮರ ಶಕ್ತಿ ಕೇಂದ್ರವಾಗಿದೆ. ಏನೇ ಪ್ರಾರಂಭ ಆದರೂ ಅಲ್ಲಿಂದಲೇ ಆಗಬೇಕು. ಇದನ್ನು ನಾಡಿನ ಜನತೆ, ಯುವಕರು ಅರ್ಥ ಮಾಡಿಕೊಳ್ಳಬೇಕು. ನಮಗೆ ಶಾಂತಿ ಬೇಕಿದೆ, ಬಡವರ ಬದುಕು ಕಟ್ಟಬೇಕಿದೆ ಎಂದು ತಿಳಿಸಿದರು.
ಮಕ್ಕಳು ಎರಡು ತಿಂಗಳಲ್ಲಿ ಪರೀಕ್ಷೆ ಬರೆಯಬೇಕಿದೆ. ಹಿಜಬ್ – ಕೇಸರಿ ಎಂಬ ವಿಚಾರ ಇಟ್ಟುಕೊಂಡು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಕಲ್ಲು ತೂರಾಟ ನಡೆದಿರೋದು ಫೌಂಡೇಶನ್ ಆಗಿದೆ. ಮುಂದೆ ಇದು ಯಾವ ರೀತಿಯ ಹಂತ ತಲುಪುತ್ತೆ ಗೊತ್ತಿಲ್ಲ. ಇದರಿಂದ ಅಮಾಯಕರು ಬಲಿಯಾಗಬಹುದು. ಹಾಗಾಗಿ ಇದನ್ನ ಇಲ್ಲಿಗೆ ನಿಲ್ಲಿಸಬೇಕಿದೆ ಎಂದು ಮನವಿ ಮಾಡಿದರು.
ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಇವರ ಬಳಿ ವಿಷಯವಿಲ್ಲ. ಹಾಗಾಗಿ ಇಂತಹ ಸೂಕ್ಷ್ಮ ವಿಷಯದಲ್ಲಿ ಮಕ್ಕಳ ಭವಿಷ್ಯ ಹಾಳು ಮಾಡ್ತಾರೆ. ಉಡುಪಿಯಲ್ಲಿ ಇದು ಹೇಗೆ ಪ್ರಾರಂಭ ಆಯ್ತು, ಯಾವ ಸಂಘಟನೆಗಳು ಇದ್ದಾವೆ ಎಲ್ಲದರ ಬಗ್ಗೆಯೂ ನನಗೆ ಮಾಹಿತಿ ಇದೆ. ಆ ವಿಚಾರ ಚರ್ಚೆ ಮಾಡಿದರೆ ನಾನು ಖಳನಾಯಕ ಆಗ್ತೇನೆ ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಭುಗಿಲೆದ್ದ ಹಿಜಬ್-ಕೇಸರಿ ವಿವಾದ- ರಾಷ್ಟ್ರಧ್ವಜ ಹಾರಿಸುವಲ್ಲಿ ಭಗವಾನ್ ಧ್ವಜ ಹಾರಿಸಿದ ವಿದ್ಯಾರ್ಥಿಗಳು
ನಾನು ಹಸಿರು ಶಾಲಿನ ಬಗ್ಗೆ ಪ್ರಚೋದನೆ ಕೊಟ್ಟಿಲ್ಲ. ನಾವು ರೈತ ಕುಟುಂಬದವರು ಅದನ್ನ ತೋರಿಸೋಣ ಎಂದಿದ್ದೇನೆ. ಹಸಿರು ಶಾಲು ಹಾಕಿಕೊಳ್ಳೋಣ ಎಂದಿದ್ದೇನೆ. ರೈತರ ಶಾಲಿಗೆ ಯಾವುದೇ ಪ್ರಚೋದನೆ ಇಲ್ಲ. ನನ್ನದು ಪ್ರಚೋದನೆ ಅಲ್ಲ, ಅಲ್ಲಿ ನಡೆಯುತ್ತಿರುವುದು ಪ್ರಚೋದನೆ. ಹಸಿರು ಶಾಲು ರೈತನ ಸಂಕೇತ, ಅದಕ್ಕೆ ಗೌರವವಿದೆ. ಇವರು ಮಾಡ್ತಿರೋದಕ್ಕೆ ಏನು ಗೌರವ ಇದೆ. ಇದು ಅಶಾಂತಿ ಉಂಟು ಮಾಡುವುದಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.