ಬೆಂಗಳೂರು: ಮನೆಗಳನ್ನು ಮಾರುವ ಅಥವಾ ಭೋಗ್ಯಕ್ಕೆ ನೀಡುವ ಕೆಲಸಕ್ಕೆ ಕೈಹಾಕಬೇಡಿ. ಏಕೆಂದರೆ ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಖಾಲಿ ಜಾಗ ಸಿಗುವುದಿಲ್ಲ. ಹೀಗಾಗಿ ಏನೇ ಕಷ್ಟ ಬಂದರೂ ಮನೆಗಳನ್ನು ಕಳೆದುಕೊಳ್ಳಬಾರದು ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಕಿವಿ ಮಾತು ಹೇಳಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂಠೀರವ ನಗರದ ನಿವಾಸಿಗಳಿಗೆ ನೋಂದಣಿ ಪತ್ರಗಳ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದ ಗೋಪಾಲಯ್ಯ, ಕಂಠೀರವ ನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಂದಿನ ಒಂದೆರಡು ತಿಂಗಳಲ್ಲಿ ಆದೇಶ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ನನ್ನ ಮಗಳನ್ನ ಜೀವಂತವಾಗಿ ನೋಡ್ತೀನಿ ಅಂದ್ಕೊಂಡಿರಲಿಲ್ಲ – ವಿದ್ಯಾರ್ಥಿನಿ ತಂದೆ ಕಣ್ಣೀರು
ಈ ಭಾಗದಲ್ಲಿ ನಾನು ಶಾಸಕನಾಗುವ ಹಿಂದೆ ಇದ್ದ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಬಗೆಹರಿಸಲಾಗಿದೆ. ಕ್ಷೇತ್ರದಲ್ಲಿ ವ್ಯವಸ್ಥಿತ ವಾಹನ ಹಾಗೂ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುವುದು. ಇನ್ನೂ ಆಗಬೇಕಿರುವ ಕಾರ್ಯಗಳ ಬಗ್ಗೆ ತಿಳಿಸಿದರೆ ಎಲ್ಲವನ್ನೂ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಇದನ್ನೂ ಓದಿ: ಬೈಕ್ ಇಎಂಐ ಕಟ್ಟಲು ಹಣವಿಲ್ಲದೇ ಸರಗಳ್ಳತನ – ಆರೋಪಿಗಳು ಅಂದರ್
ಈ ಸಂದರ್ಭದಲ್ಲಿ 99 ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ ಗೋಪಾಲಯ್ಯ, ಬಿಜೆಪಿ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್, ಹನುಮಂತು, ನಾರಾಯಣ್, ಆನಂದ್, ಲೋಕೇಶ್, ನಾರಾಯಣ ಸ್ವಾಮಿ, ಬೆಟ್ಟಪ್ಪ ಇತರರು ಉಪಸ್ಥಿತರಿದ್ದರು.