ಚೆನ್ನೈ: ತಮಿಳುನಾಡು ಮಾಜಿ ಸಿಎಂ ಮೃತ ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಯಬೇಕೆಂಬ ಓ ಪನ್ನೀರ್ ಸೆಲ್ವಂ ಅವರ ಒತ್ತಾಯಕ್ಕೆ ಡಿಎಂಕೆ ಬೆಂಬಲ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಪನ್ನೀರ್ ಸೆಲ್ವಂ, ನಾನು ಸಿಎಂ ಆಗಿದ್ದಾಗ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಆರಂಭಿಸಲಾಗಿತ್ತು. ಆದರೆ ನಂತರ ಎಲ್ಲಾ ತಲೆಕೆಳಗಾಯಿತು ಎಂದು ಹೇಳಿದ್ದರು.
ಶುಕ್ರವಾರದಂದು ಜಯಲಲಿತಾ ಅವರ 69ನೇ ಜನ್ಮವಾರ್ಷಿಕೋತ್ಸವದ ಪ್ರಯುಕ್ತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪನ್ನೀರ್ಸೆಲ್ವಂ, ಅಮ್ಮನ ಹೋರಾಟದಿಂದಲೇ ನಾವು ಇವತ್ತು ಇಲ್ಲಿದ್ದೀವಿ. ಅಮ್ಮನ ಸಾವಿನ ಬಗ್ಗೆ ನಮಗೆ ಉತ್ತರ ಬೇಕು ಅಂದ್ರು.
ಈ ಬಗ್ಗೆ ಮಾತನಾಡಿರೋ ಡಿಎಂಕೆ ವಕ್ತಾರರಾದ ಸರವಣನ್, ನಮ್ಮ ನಾಯಕ ಎಂಕೆ ಸ್ಟ್ಯಾಲಿನ್ ಕೂಡ ಜಯಾ ಸಾವಿನ ತನಿಖೆಗೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಜಯಾ ಸಾವಿನ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದ್ದರು. ಇದರಲ್ಲಿ ಏಮ್ಸ್ನ ವೈದ್ಯರು ಕೂಡ ಇರುವುದರಿಂದ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳಿದ್ದರು. ಇದೀಗ ಪನ್ನೀರ್ ಸೆಲ್ವಂ ಕೂಡ ಜಯಾ ಸಾವಿನ ತನಿಖೆ ಆಗಬೇಕು ಎಂದಿದ್ದು ನಮ್ಮ ನಾಯಕ ಹೇಳಿದ ವಿಚಾರಕ್ಕೆ ಪುಷ್ಠಿ ನೀಡಿದೆ ಅಂತ ಹೇಳಿದ್ರು.
ಈ ನಡುವೆ ಶುಕ್ರವಾರದಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ವರದಿಗಾರರೊಂದಿಗೆ ಮಾತನಾಡಿ, ಜಯಲಲಿತಾ ಸಾವಿನ ಕುರಿತು ಯಾವುದೇ ರಹಸ್ಯಗಳಿಲ್ಲ ಎಂದು ಹೇಳಿದ್ದಾರೆ. ಕೆಲವರು ಆರೋಪ ಮಾಡುತ್ತಿರುವಂತೆ ಜಯಲಲಿತಾ ಸಾವಿನ ಹಿಂದೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಸುಮಾರು ಎರಡು ತಿಂಗಳ ಕಾಲ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಡಿಎಂಬರ್ 5ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ರು.