ಬೆಂಗಳೂರು: ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕನಸಿನ ಹುದ್ದೆಗೆ ಮತ್ತೊಂದು ವಿಘ್ನ ಎದುರಾಗಿದೆ. ಅಂದುಕೊಂಡಿದ್ದು ಆಗೆ ಬಿಡ್ತು ಎನ್ನುವಾಗ ಡಿಕೆಶಿಗೆ ಮತ್ತೆ ಟೈಮ್ ಕೈ ಕೊಟ್ಟಿದೆ. ಟ್ರಬಲ್ ಶೂಟರ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗ್ರೀನ್ ಸಿಗ್ನಲ್ ಕೊಡಲು ಮುಂದಾದ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಯವರ ತೀರ್ಮಾನಕ್ಕೆ ಅವರ ಆಪ್ತ ಹಿರಿಯ ನಾಯಕ ಬ್ರೇಕ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಪಟ್ಟಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಬಹುತೇಕ ಆಂತಿಮವಾಗಿದೆ. ಡಿಕೆ ಶಿವಕುಮಾರ್ ಹೆಸರನ್ನ ಅಧಿಕೃತವಾಗಿ ಪ್ರಕಟಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಮುಂದಾಗಿದ್ದರು. ಆದರೆ ಸೋನಿಯಾ ಗಾಂಧಿಯವರ ಆಪ್ತ ಎಐಸಿಸಿ ನಾಯಕರೊಬ್ಬರು ಪ್ರಕಟಣೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ.
ಐಟಿ, ಇಡಿಗೆ ತಮ್ಮ ಕೇಸುಗಳ ಬಗ್ಗೆ ಡಿಕೆ ಶಿವಕುಮಾರ್ ಸಾಕಷ್ಟು ದಾಖಲೆಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಕಟಣೆ ಬೇಡ ಕೇಸುಗಳು ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ನೋಡಿ ಹೆಸರು ಪ್ರಕಟಿಸೋಣ ಎಂದಿದ್ದಾರೆ. ಇನ್ನೊಂದು ಕಡೆ ವಿಪಕ್ಷ ನಾಯಕ ಹಾಗೂ ಸಿಎಲ್ ಪಿ ನಾಯಕನ ಆಯ್ಕೆಯು ಬಾಕಿ ಉಳಿದಿದೆ. ಆದ್ದರಿಂದ ಇದೊಂದರ ಪ್ರಕಟಣೆ ಸದ್ಯಕ್ಕೆ ತಡೆ ಹಿಡಿಯುವುದೆ ಉತ್ತಮ ಎಂಬ ಸಲಹೆ ನೀಡಿದ್ದಾರೆ. ಆ ಮೂಲಕ ಸಿಎಲ್ ಪಿ, ವಿಪಕ್ಷ ನಾಯಕನ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಲು ಹೈ ಕಮಾಂಡ್ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಷ್ಟರಲ್ಲಿ ಇಡಿ ಹಾಗೂ ಐಟಿ ಕೇಸುಗಳ ಸಂಬಂಧ ಯಾವುದೇ ಸಮಸ್ಯೆ ಆಗದಿದ್ದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಘೋಷಣೆ ಆಗುವ ಸಾಧ್ಯತೆಗಳಿವೆ.