ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ನಡೆದ ಜಗಳಕ್ಕೆ ಬಿಜೆಪಿ ‘ಆಪರೇಷನ್ ಕಮಲ’ ಕಾರಣ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಸಭೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ಆಗಮಿಸಿ ಮಾತನಾಡಿದ ಡಿಕೆ ಸುರೇಶ್ ಅವರು, ಬಿಜೆಪಿಯ ಆಪರೇಷನ್ ಕಮಲದಲ್ಲಿ ಹಣದ ವ್ಯವಹಾರವೂ ನಡೆದಿದ್ದು, ರೆಸಾರ್ಟಿನಲ್ಲಿ ಶಾಸಕರ ನಡುವೆ ಗಲಾಟೆಗೆ ಬಿಜೆಪಿಯೇ ಕಾರಣ. ಅವರು ಕೈಗೊಂಡಿದ್ದ ಆಪರೇಷನ್ ಕಮಲದಿಂದಲೇ ನಾವು ರೆಸಾರ್ಟಿಗೆ ಹೋಗಿದ್ದು, ಇಲ್ಲವಾದರೆ ರೆಸಾರ್ಟಿಗೆ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಧ್ಯಮಗಳ ವರದಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮಾಧ್ಯಮದವರು ಕೆಲವು ವಿಷಯ ಮುಚ್ಚಿಟ್ಟಿದ್ದಾರೆ. ಆಪರೇಷನ್ ಕಮಲ ಯಾವ ಹಂತದಲ್ಲಿ ನಡೆಯುತ್ತಿದೆ. ಎಷ್ಟು ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇದೆ. ಆದರೆ ಮಾಧ್ಯಮಗಳು ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಶಾಸಕರ ನಡುವಿನ ಗಲಾಟೆಯ ಬಗ್ಗೆ ಸಮರ್ಥನೆ ನೀಡಲು ಯತ್ನಿಸಿ ಗೊಂದಲ ವಾತಾವರಣ ನಿರ್ಮಾಣ ಮಾಡುವಂತೆ ಹೇಳಿಕೆ ನೀಡಿದರು.
ಇದೇ ವೇಳೆ ಆಪರೇಷನ್ ಕಮಲದಲ್ಲಿ ನಡೆದಿದೆ ಎಂದು ಹೇಳುತ್ತಿರುವ ಹಣಕಾಸಿನ ವ್ಯವಹಾರದ ಬಗ್ಗೆ ನಿಮಗೆ ಇರುವ ಮಾಹಿತಿ ನೀಡಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ, ಎಲ್ಲವೂ ಮಾಧ್ಯಮಗಳಿಗೆ ತಿಳಿದಿದೆ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ನಡೆಸಿದರು. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್
ಉಲ್ಟಾ ಹೊಡೆದ ಡಿಕೆ ಸುರೇಶ್: ಶಾಸಕ ಆನಂದ್ ಸಿಂಗ್ ಅವರು ಎದೆ ನೋವಿನ ಕಾರಣ ಆಸ್ಪತ್ರೆಗೆ ಸೇರಿದ್ದಾರೆ ಎಂದು ಅಂದು ಮಾಹಿತಿ ನೀಡಿದ್ದ ಡಿಕೆ ಸುರೇಶ್ ಅವರು, ಇಂದು ಕಾಂಗ್ರೆಸ್ ಶಾಸಕ ಶಾಸಕರ ನಡುವಿನ ಗಲಾಟೆಗೆ ಆಪರೇಷನ್ ಕಮಲವೇ ಕಾರಣ ಎಂದು ಹೇಳಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಇದೇ ವೇಳೆ ಯಾವುದೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನಿನ ಪ್ರಕಾರ ಪೊಲೀಸರು ಕ್ರಮ ತೆಗದುಕೊಳ್ಳುತ್ತಾರೆ. ಆನಂದ್ ಸಿಂಗ್ ಬಹುಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ಆಪರೇಷನ್ ಕಮಲದ ಬಗ್ಗೆ ಪದೇ ಪದೇ ದಾಖಲೆ ಬಿಡುಗಡೆ ಮಾಡುತ್ತೇವೆ. ಈ ಮೂಲಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಸೂಕ್ತ ಸಮಯ ಬಂದರೆ ಬಿಡುಗಡೆ ಮಾಡುತ್ತೇವೆ ಎಂದು ಜಾರಿಕೊಂಡಿದ್ದರು. ಆದರೆ ಇದುವರೆಗೂ ದೋಸ್ತಿ ಸರ್ಕಾರದ ಯಾವುದೇ ನಾಯಕರು ಕೂಡ ಅಧಿಕೃತವಾಗಿ ಹಣಕಾಸಿನ ವ್ಯವಹಾದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ.
https://www.youtube.com/watch?v=yHwEYzuJJPM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv