– ಡಿಕೆಶಿ ರಾಜೀನಾಮೆಗೆ ಬಿಜೆಪಿ ನಾಯಕರ ಆಗ್ರಹ
ನವದೆಹಲಿ: ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ (Muslims) 4% ರಷ್ಟು ಮೀಸಲಾತಿ ನೀಡುವುದನ್ನು ಸಮರ್ಥನೆ ನೀಡುವ ಭರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಾಹಿನಿಯೊಂದರ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ಈಗ ಬಿಜೆಪಿ (BJP) ಹೊಸ ಅಸ್ತ್ರ ಸಿಕ್ಕಿದಂತಾಗಿದೆ.
ಸಂವಿಧಾನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಸಂವಿಧಾನವನ್ನೇ (Constitution) ಬದಲಾಯಿಸುವ ತೀರ್ಪುಗಳಿವೆ ಎಂದು ದೆಹಲಿ (Delhi) ಕಾರ್ಯಕ್ರಮದಲ್ಲಿ ಡಿಸಿಎಂ ಹೇಳಿದ್ದರು.
ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ಸಂಸತ್ನ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿತು. ಕಾಂಗ್ರೆಸ್ (Congress) ನಾಯಕರೊಬ್ಬರು ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಕಾಂಗ್ರೆಸ್ ಸಂವಿಧಾನವನ್ನು ತುಂಡು ತುಂಡಾಗಿ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ರಾಜ್ಯಸಭೆಯಲ್ಲಿ ಆರೋಪ ಮಾಡಿದರು. ನಡ್ಡಾ(JP Nadda) ಆರೋಪಕ್ಕೆ ಲೆಹರ್ ಸಿಂಗ್ ದನಿಗೂಡಿಸಿದರು. ಇದನ್ನೂ ಓದಿ: ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?
ನಡ್ಡಾ ಆರೋಪವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಖಂಡಿಸಿದರು. ಇದು ಗದ್ದಲಕ್ಕೆ ಕಾರಣವಾಯ್ತು. ಅತ್ತ ಲೋಕಸಭೆಯಲ್ಲೀ ಇದೇ ವಿಚಾರ ಪ್ರತಿಧ್ವನಿಸಿತು. ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಿಸ್ತೇವೆ ಎಂದಿದ್ದಾರೆ. ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಈ ಕೂಡಲೇ ಡಿ.ಕೆ ಶಿವಕುಮಾರ್ ರಾಜೀನಾಮೆ ಪಡೀಬೇಕು ಎಂದು ಕಾನೂನು ಸಚಿವ ಕಿರಣ್ ರಿಜಿಜು ಆಗ್ರಹಿಸಿದರು.
ತುಷ್ಟಿಕರಣ ನೀತಿಯ ಪರಾಕಾಷ್ಠೆ. ಮು’ಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತಾರಂತೆ ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು.
ಮು’ಸ್ಲಿಮರ ತುಷ್ಟಿಕರಣಕ್ಕೆ, ಡಾ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸುವ ಮಟ್ಟಕ್ಕೂ ಇಳಿಯುತ್ತಾರೆ ಕಾಂಗ್ರೆಸ್ಸಿಗಳು ಅನ್ನುವುದು ನಮ್ಮ ದೇಶದ ದುರಂತ.
ನಾಚಿಕೆಯಾಗಬೇಕು… pic.twitter.com/5vgtOn5noN
— C T Ravi 🇮🇳 ಸಿ ಟಿ ರವಿ (@CTRavi_BJP) March 24, 2025
ಇದನ್ನು ಖಂಡಿಸಿದ ಶಶಿ ತರೂರ್, ಅದು ರಾಜ್ಯ ವಿಚಾರ. ಇಲ್ಲೇಕೆ ಪ್ರಸ್ತಾಪ ಮಾಡಬೇಕು ಎಂದು ಕೇಳಿದರು. ಸದನದ ಸಮಯವನ್ನು ಬಿಜೆಪಿಗರು ಹಾಳು ಮಾಡ್ತಿದ್ದಾರೆ ಅಂತಾ ಪ್ರಿಯಾಂಕಾ ವಾದ್ರಾ ಕಿಡಿಕಾರಿದರು.
ಗದ್ದಲದಿಂದಾಗಿ ಹಲವು ಬಾರಿ ಉಭಯ ಸದನಗಳು ಮುಂದೂಡಿಕೆ ಆದ್ವು. ಇದರ ಮಧ್ಯೆ, ರಿಜಿಜು ವಿರುದ್ಧ ಕಾಂಗ್ರೆಸ್ನ ಜೈರಾಮ್ ರಮೇಶ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಮುಸ್ಲಿಮರಿಗೆ ಮೀಸಲಾತಿ ನೀಡುವ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಮುಸ್ಲಿಮರು ಪಂಕ್ಚರ್ ಹಾಕೋರು ಎಂದು ಬಿಜೆಪಿಯ ಅನೇಕರು ಹೇಳಿದ್ದಾರೆ. ಸಮಾಜದ ಪ್ರತಿಯೊಂದು ವರ್ಗ ಮೇಲಕ್ಕೆತ್ತುವುದು ನಮ್ಮ ಜವಾಬ್ದಾರಿ. ನಾವು ಏನಾದರೂ ಪ್ರಾರಂಭಿಸಿದಾಗ ಎಲ್ಲರೂ ನ್ಯಾಯಾಲಯಕ್ಕೆ ಹೋಗುತ್ತಾರೆ ಎನ್ನುವುದು ಗೊತ್ತಿದೆ. ನ್ಯಾಯಾಲಯದಿಂದ ಯಾವ ತೀರ್ಮಾನ ಬರುತ್ತದೆಯೋ ನೋಡೋಣ. ಒಳ್ಳೆಯ ದಿನಕ್ಕಾಗಿ ಕಾಯೋಣ. ಬಹಳಷ್ಟು ಬದಲಾವಣೆಗಳಿವೆ. ಸಂವಿಧಾನ ಬದಲಾಗಲಿದೆ. ಸಂವಿಧಾನವನ್ನೇ ಬದಲಾಯಿಸುವ ತೀರ್ಪುಗಳಿವೆ.