ಬೆಂಗಳೂರು: ಶುಕ್ರವಾರ ನಡೆದ ಕಲಾಪದಲ್ಲಿ ವಿಶ್ವಾಸಮತ ಯಾಚಿಸುತ್ತೇನೆ ಎಂದು ಹೇಳಿ ಸಿಎಂ ಶಾಕ್ ಕೊಟ್ಟಿದ್ದಾರೆ. ಇದೀಗ ದೋಸ್ತಿ ನಾಯಕರಿಂದ ಅತೃಪ್ತರ ಮನವೊಲಿಕೆ ಮಾಡಲು ಸರ್ಕಸ್ ಮಾಡುತ್ತಿದ್ದಾರೆ.
ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಟ್ರಬಲ್ ಶೂಟರ್ ಡಿಕೆಶಿ ಅಖಾಡಕ್ಕಿಳಿದಿದ್ದು, ಎಂಟಿಬಿ ನಾಗರಾಜ್ ಅವರ ಮನವೊಲಿಕೆಗಾಗಿ ಅವರ ನಿವಾಸಕ್ಕೆ ಹೋಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಎಂಟಿಬಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸುಮಾರು 5 ಗಂಟೆಯಿಂದ ಡಿ.ಕೆ.ಶಿವಕುಮಾರ್ ಎಂಟಿಎಂ ನಾಗರಾಜ್ ಅವರ ಮನೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ.
ನಿಮ್ಮ ಬೇಸರವೇನು? ನಾವು ಪರಿಹಾರ ಮಾಡುತ್ತೇವೆ ಎಂದು ಡಿಕೆಶಿ ಸಮಾಧಾನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು ಎರಡು ಗಂಟೆಯಿಂದ ಮನವೊಲಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದು ಸಫಲವಾಗುತ್ತಾ ಎಂಬ ಕುತೂಹಲ ಮೂಡಿದೆ. ಡಿಕೆಶಿ ಅವರು ಮಾತಿಗೂ ಎಂಟಿಬಿ ನಾಗರಾಜ್ ರಾಜೀನಾಮೆ ವಾಪಸ್ ತೆಗೆದುಕೊಂಡಿಲ್ಲ ಎಂದರೆ ಖುದ್ದಾಗಿ ಸಿಎಂ ಅವರು ಬಂದು ಮತ್ತೊಮ್ಮೆ ಮನವೊಲಿಕೆ ಕೆಲಸ ಮಾಡುವ ಸಾಧ್ಯತೆ ಇದೆ.
ಎಂಟಿಬಿ ನಾಗಾರಾಜ್ ಮತ್ತು ಸುಧಾಕರ್ ಇಬ್ಬರು ಬುಧವಾರ ಒಟ್ಟಿಗೆ ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿದ್ದರು. ಸುಧಾಕರ್ ರಾಜೀನಾಮೆ ನೀಡಿ ಹೊತಬರುತ್ತಿದ್ದಂತೆಯೇ ಭಾರೀ ಹೈಡ್ರಾಮವೇ ನಡೆಯಿತು. ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಸದ್ಯಕ್ಕೆ ರಾಜ್ಯದಲ್ಲಿರುವ ಅತೃಪ್ತ ಶಾಸಕರನ್ನು ಮನವೊಲಿಕೆಗೆ ಪ್ರಯತ್ನ ಮಾಡುತ್ತಿದ್ದಾರೆ.