ಬೆಂಗಳೂರು: ಸಮ್ಮಿಶ್ರ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ನ ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಆದರೆ ಇಂಧನ ಖಾತೆ ಕೈ ತಪ್ಪುತ್ತಿದಂತೆ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪಕ್ಷದ ಸಭೆಯಲ್ಲಿ ಹಿರಿಯ ನಾಯಕರೊಂದಿಗೆ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ಪಕ್ಷಕ್ಕಾಗಿ ದುಡಿದ ತಮಗೇ ಪ್ರಮುಖ ಸಚಿವ ಸ್ಥಾನ ನೀಡದ್ದಿದ್ದರೆ ಸಾರ್ವಜನಿಕ ವಲಯದಲ್ಲಿ ನನ್ನ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿದೆ.
ಸತತವಾಗಿ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದ ನನಗೆ ಪ್ರಮುಖ ಖಾತೆ ಸಿಗದಿದ್ದರೆ ಸಹಜವಾಗಿ ಸಾರ್ವಜನಿಕ ವಲಯಗಳಲ್ಲಿ ನನ್ನ ಶಕ್ತಿಯೂ ಕಡಿಮೆಯಾಗುತ್ತದೆ. ಅತ್ತ ಕೇಂದ್ರ ಸರ್ಕಾರವೂ ನಮ್ಮ ಮೇಲೆ ಕೆಂಗಣ್ಣು ಬೀರುತ್ತಿದೆ. ಇತ್ತ ಮೈತ್ರಿಕೂಟ ಸರ್ಕಾರದಲ್ಲಿ ಅಶಕ್ತನನ್ನಾಗಿ ಮಾಡಿ ಕೂರಿಸಲು ಪಕ್ಷವೇ ಸಿದ್ಧವಾಗಿದೆ. ಹೀಗಾಗಿ ಒಂದು ಕೆಲಸ ಮಾಡಿ, ನನಗೆ ಪ್ರಮುಖ ಖಾತೆಗಳನ್ನು ನೀಡುವ ಬದಲು ಮುಜುರಾಯಿ ಖಾತೆಯನ್ನು ನೀಡಿ. ಸುಮ್ಮನೆ ದೇವಾಲಯಗಳನ್ನಾದರೂ ಸುತ್ತುತ್ತಾ ಕಾಲ ಕಳೆಯುತ್ತೇನೆ ಎಂದು ಡಿಕೆಶಿ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.
ಇತ್ತ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷ ಬೇಷರತ್ ಬೆಂಬಲ ನೀಡಿದ್ದು, ಐದು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಸಿಎಂ ಆಗಿರಲಿ. ಅದೇ ರೀತಿ ನಿಮಗೆ ಬೇಕಾದ ಖಾತೆಗಳನ್ನು ನೀವು ಇಟ್ಟುಕೊಳ್ಳಿ ಎಂದು ಹೇಳಿದ್ದೇವೆ. ಹೀಗಾಗಿ ಖಾತೆಗಾಗಿ ಯಾರೂ ತಕರಾರು ಮಾಡಬೇಡಿ ಎಂದು ಕೈ ಪಾಳಯದ ವರಿಷ್ಠರು ರಾಜ್ಯದ ಪ್ರಮುಖ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದಲ್ಲಿ ಇಂಧನ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್ ಪಕ್ಷದ ವರಿಷ್ಠರು ನಿರಾಸೆ ಮೂಡಿಸಿದ್ದರು. ಪಕ್ಷದ ಧೋರಣೆಯಿಂದ ಸದ್ಯ ಡಿಕೆ ಶಿವಕುಮಾರ್ ಅವರಿಗೆ ಕಸಿವಿಸಿಯಾಗಿದೆ. ಸದ್ಯ ಜೆಡಿಎಸ್ ನಾಯಕರದ ಶಾಸಕ ರೇವಣ್ಣ ಅವರು ಸಹ ಇಂಧನ ಖಾತೆಗೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಶಿವಕುಮಾರ್ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಸಭೆಯಲ್ಲಿ ಭಾವಹಿಸುವ ಮುನ್ನ ಮತನಾಡಿದ ಅವರು, ಉತ್ತರ ಕರ್ನಾಟಕ ಹಿರಿಯ ನಾಯಕರಾದ ಎಸ್ಆರ್ ಪಾಟೀಲ್ ರಾಜೀನಾಮೆ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಆ ಭಾಗದಿಂದ ನಮಗೇ ಹೆಚ್ಚಿನ ಸ್ಥಾನ ಲಭಿಸಿಲ್ಲ. ಪಕ್ಷ ಹಿರಿಯ ನಾಯಕರಾಗಿ ಅವರಿಗೆ ನೋವಾಗಿರುತ್ತದೆ. ಸದ್ಯ ಸಂಪುಟ ಖಾತೆ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಆದರೆ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಹೇಳಿದರು.