ನವದೆಹಲಿ: ಶುಕ್ರವಾರವೇ ಸುಮಾರು 5 ಗಂಟೆಗಳ ಕಾಲ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಡ್ರಿಲ್ ಮಾಡಿದ್ದಾರೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಇಂದು ಸಿಂಗಾಪುರ ವ್ಯವಹಾರದಿಂದ ಡಿಕೆಶಿಗೆ ಕಂಟಕವಾಗಲಿದ್ಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಹಾಜರಾಗುತ್ತಾರೆ. ಇಡಿಗೆ ಡಿ.ಕೆ ಶಿವಕುಮಾರ್ ಅವರ ಸಿಂಗಾಪುರದ ವಹಿವಾಟಿನ ಬಗ್ಗೆಯೇ ಹೆಚ್ಚು ಕುತೂಹಲವಾಗಿದೆ. ಹೀಗಾಗಿ ಈ ಬಗ್ಗೆಯೇ ಕೆದಕಿ ಕೆದಕಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಶ್ನೆ ಕೇಳುತ್ತಿದ್ದಾರೆ. ಶುಕ್ರವಾರದ ವಿಚಾರಣೆ ವೇಳೆಯೂ ಸಿಂಗಾಪುರ ವ್ಯವಹಾರ ಬಗ್ಗೆಯೂ ಪ್ರಶ್ನೆ ಕೇಳಿದ್ದರು. ಇಂದು ಮತ್ತೆ ಸಿಂಗಾಪುರ ವ್ಯವಹಾರ ಬಗ್ಗೆಯೂ ಪ್ರಶ್ನೆ ಮಾಡುವ ಸಾಧ್ಯತೆ ಇದೆ.
ಸಿಂಗಾಪುರ ವ್ಯವಹಾರ?
2017 ರಲ್ಲಿ ಐಟಿ ಅಧಿಕಾರಿಗಳು ದೆಹಲಿಯ ಅಪಾರ್ಟ್ ಮೆಂಟಿನ ಮೇಲೆ ದಾಳಿ ಮಾಡಿದ್ದರು. ಅಂದು ನಗದು ಹಣದ ಜೊತೆಗೆ ಡಿ.ಕೆ.ಶಿವಕುಮಾರ್ ವಿದೇಶಿ ವ್ಯವಹಾರ ಮಾಡುತ್ತಿದ್ದಕ್ಕೆ ಸಂಬಂಧಪಟ್ಟಂತಹ ದಾಖಲಾತಿಗಳು ಸಿಕ್ಕಿದ್ದವು. ಅದರಲ್ಲೂ ಪ್ರಮುಖವಾಗಿ ಸಿಂಗಾಪುರದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಎಂಬುದಕ್ಕೆ ಪ್ರಮುಖವಾದ ದಾಖಲಾತಿಗಳು ದೊರಕ್ಕಿದ್ದವು. ಆ ದಾಖಲಾತಿಗಳನ್ನು ಐಟಿ ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಿದ್ದರು.
ಹೀಗಾಗಿ ಸಿಂಗಾಪುರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿನ್ನೆಯೇ ವಿಚಾರಣೆ ಮಾಡಿದ್ದಾರೆ. ಇಂದು ಅದಕ್ಕೆ ಸೂಕ್ತವಾದ ದಾಖಲಾತಿಗಳನ್ನು ತರುವಂತೆ ಇಡಿ ಅಧಿಕಾರಿಗಳು ಡಿಕೆಶಿಗೆ ಸೂಚಿಸಿದ್ದಾರೆ. ಹೀಗಾಗಿ ದಾಳಿ ವೇಳೆ ಸಿಕ್ಕಿದ್ದ ಹಣಕ್ಕಿಂತ ಸಿಂಗಾಪುರದಲ್ಲಿ ಮಾಡುತ್ತಿರುವ ವ್ಯವಹಾರದ ಬಗ್ಗೆಯೇ ಇಡಿ ತನಿಖೆ ಮಾಡುತ್ತಿದೆ. ಸಿಂಗಾಪುರದಲ್ಲಿನ ವ್ಯವಹಾರದಿಂದಲೇ ಡಿಕೆಶಿ ಬಂಧನವಾಗುವ ಸಾಧ್ಯತೆ ಇದೆ.