ಉಡುಪಿ: ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಇಂದು ತಮ್ಮ ಪತ್ನಿ ಉಷಾ ಅವರ ಜೊತೆ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಮಾಡಿದ್ದಾರೆ.
ಕೃಷ್ಣಮಠದ ಪರ್ಯಾಯ ಪಲಿಮಾರು ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ನಂತರ ಮಠದಲ್ಲಿ ಮಾಧ್ಯಮಗಳ ಜೊತೆ ಡಿಕೆಶಿ ಮಾರ್ಮಿಕ ಮಾತನಾಡಿದರು. ಶ್ರೀಕೃಷ್ಣ ಒಬ್ಬ ಸಮರ್ಥ ರಾಜಕಾರಣಿ. ರಾಜಕಾರಣಿಯನ್ನು ದೇವರ ಹೆಸರಲ್ಲಿ ಧರ್ಮ ಸ್ಥಾಪನೆಗೆ ಪ್ರತಿಷ್ಠಾಪಿಸಲಾಗಿದೆ. ಹಾಗಾಗಿ ರಾಜಕಾರಣಿಗಳು ಹೆಚ್ಚಾಗಿ ಕೃಷ್ಣಮಠಕ್ಕೆ ಬರ್ತಾರೆ ಅಂತ ಹೇಳಿದ್ರು.
ಮಠಕ್ಕೆ ಯಾರು ಬಂದ್ರು ಯಾರು ಬರಲಿಲ್ಲ ಮುಖ್ಯವಲ್ಲ. ನನಗೆ ಕೃಷ್ಣನ ಮೇಲೆ ಬಹಳ ನಂಬಿಕೆಯಿದೆ. ಪಕ್ಷದ ಪರವಾಗಿ, ವೈಯುಕ್ತಿಕವಾಗಿ ಸರ್ಕಾರದ ಪರವಾಗಿ ಬಂದಿದ್ದೇನೆ ಅಂತ ಹೇಳಿದ ಅವರು, ದೇವರಲ್ಲಿ ಏನು ಬೇಡಿಕೊಂಡ್ರಿ ಎಂಬ ಪ್ರಶ್ನೆಗೆ ಭಕ್ತ – ಭಗವಂತನ ವ್ಯವಹಾರ ನಮ್ಮಿಬ್ರಿಗೆ ಗೊತ್ತಿದೆ. ಪೂಜ್ಯ ಶ್ರೀಗಳೂ ಆಶೀರ್ವಾದ ಮಾಡಿದ್ದಾರೆ. ನಾನು ಬೇಡಿದನ್ನು, ಶೀಗಳು ಆಶೀರ್ವಾದ ಮಾಡಿದ್ದನ್ನೆಲ್ಲ ಬಹಿರಂಗ ಮಾಡಲ್ಲ ಅಂತ ಬೇಡಿಕೆ ಮತ್ತು ಆಶೀರ್ವಾದವನ್ನು ಗೌಪ್ಯವಾಗಿಟ್ಟರು.
ಶ್ರೀಕೃಷ್ಣ ನನಗೆ ಮಾದರಿ ಅಂದ್ರು. ಈ ಬಾರಿ ಧರ್ಮ ಅಧರ್ಮದ ನಡುವಿನ ಚುನಾವಣೆ. ನಮ್ಮದು ಧರ್ಮ- ಬಿಜೆಪಿದ್ದು ಅಧರ್ಮ ಅಂದ್ರು. ಮಠಕ್ಕೆ ಬರುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಸಿದ್ದರಾಮಯ್ಯ ಮಠಕ್ಕೆ ಬರಲಿಲ್ಲ ಎನ್ನುವುದು ಸತ್ಯ. ಹಾಗಂತ ಸಿದ್ದರಾಮಯ್ಯನವರು ಮುಜರಾಯಿ ಇಲಾಖೆ ಮುಚ್ಚಲಿಲ್ಲವಲ್ಲ ಅಂತ ಹೇಳಿದರು.
ಮೋದಿ, ಅಮಿತ್ ಶಾ ದೇವೇಗೌಡರನ್ನು ಹೊಗಳಲಿ. ಅಂತರಂಗದ ವಿಷಯ ಗೌಪ್ಯ. ಯಾವ ಗರ್ಭಗುಡಿಯಲ್ಲಿ ಏನು ಅಡಗಿದ್ಯೋ ನಾನು ಚರ್ಚೆ ಮಾಡಲ್ಲ ಅಂತ ಜೆಡಿಎಸ್ ಅನಿವಾರ್ಯ ಪರಿಸ್ಥಿತಿ ಬಂದ್ರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೆ ಅಂತ ಹೇಳಿದ್ರು. ಐಟಿ ಕಾಂಗ್ರೆಸ್ ಮೇಲೆ ನಿರಂತರ ದಾಳಿ ಮಾಡಿದೆ. ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು. ಡಿಕೆ ಶುದ್ಧ ನೀರು ಮಾಡಿ 5 ವರ್ಷವಾಯ್ತು. ಈಗ ವಾಟರ್ ಕ್ಯಾನ್ ಮಾಡಿದ್ದಲ್ಲ. ವಾಟರ್ ಕ್ಯಾನ್ ಹಂಚುವ ಅವಶ್ಯಕತೆ ನಮಗಿಲ್ಲ ಅಂತ ವಾಗ್ದಾಳಿ ನಡೆಸಿದ್ರು.
ರಾಜಕಾರಣದಲ್ಲಿ ಸಾಧಿಸುವುದು ಮತ್ತಷ್ಟಿದೆ ಅನ್ನುವ ಡಿಕೆ ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರುವುದು ಸುಳ್ಳಲ್ಲ. ಭಗವಾನ್ ಶ್ರೀ ಕೃಷ್ಣನಲ್ಲಿ, ಮುಖ್ಯಪ್ರಾಣನಲ್ಲಿ ಅದನ್ನು ಬೇಡಿಕೊಂಡಿದ್ದೇನೆ ಅಂತ ನೇರವಾಗಿ ಒಪ್ಪಿಕೊಳ್ಳದಿದ್ದರೂ ಮಾರ್ಮಿಕವಾಗಿ ಹೇಳಿದರು.