ಬೆಂಗಳೂರು: ಲಿಂಗಾಯತರು, ಒಕ್ಕಲಿಗರು (Lingayat, Vokkaligas) ಭಿಕ್ಷುಕರಲ್ಲ. ಇದು ನಮಗೆ ಬೇಕಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಮೀಸಲಾತಿ (Reservation) ನಿರ್ಧಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು. ಆದರೆ ಬಿಜೆಪಿ (BJP) ವೈಯಕ್ತಿಕವಾದ ತೀರ್ಮಾನ ಮಾಡಿದೆ. 30-40 ದಿನಗಳಲ್ಲಿ ಕಾಂಗ್ರೆಸ್ (Congress) ಸರ್ಕಾರ ಬರಲಿದೆ. ಆಗ ಇದೆಲ್ಲವನ್ನ ರದ್ದು ಮಾಡುತ್ತೇವೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕದ ಜನರ ಸಮಾಧಿ ಕಟ್ಟುತ್ತಿದೆ ಬಿಜೆಪಿ : ಹೆಚ್ಡಿಕೆ
ಸಂವಿಧಾನದ (Constitution) ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವರು ಇಂದು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಜನಾಂಗವನ್ನು ರಕ್ಷಿಸಬೇಕಾದವರು ಮೋಸ ಮಾಡಲು ಹೊರಟಿದ್ದಾರೆ. ಬಿಜೆಪಿ ನಡತೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ದೂರಿದರು.
ರಾಜ್ಯ, ಕೇಂದ್ರ ಸರ್ಕಾರಗಳು ಸೇಡಿನ ರಾಜಕಾರಣ ಮಾಡುತ್ತಿದ್ದು, 90 ದಿನದಲ್ಲಿ ಮೂರು ಬಾರಿ ಮೀಸಲಾತಿ ಬದಲಿಸಲು ಹೊರಟಿದ್ದಾರೆ. ಯಾವುದೇ ಆಯೋಗ ವರದಿ ಕೊಟ್ಟಿಲ್ಲ. ಇವರೇ ಕುಳಿತುಕೊಂಡು ಚೀಟಿಯಲ್ಲಿ ಬರೆದು ಮೀಸಲಾತಿ ಬದಲಾಯಿಸಲು ಹೊರಟಿದ್ದಾರೆ. ಇಲ್ಲಿ ಯಾರೂ ಭಿಕ್ಷುಕರಲ್ಲ. ಎಸ್ಸಿ, ಎಸ್ಟಿ, ಮುಸ್ಲಿಮರು, ಹಿಂದುಳಿದ ವರ್ಗದವರು ಮನುಷ್ಯರಲ್ಲವೇ? ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ ಶೇ.4 ರಷ್ಟು ಮೀಸಲಾತಿಯನ್ನು ತೆಗೆದಿದ್ದು ಯಾಕೆ ಎಂದು ಪ್ರಶ್ನಿಸಿದರು.