ಬೆಂಗಳೂರು: ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿ ಮುಂದುವರಿಯುವುದು ಖಚಿತವಾಗಿದೆ. ಅದೇ ರೀತಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗುವುದು ಖಚಿತವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಟ್ಟಾಗಿ ಹೋದರೆ ಮಾತ್ರ ಸಾಧ್ಯ ಅಂತ ರಾಜ್ಯ ಕಾಂಗ್ರೆಸ್ ನ ಬಹುತೇಕ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರನ್ನು ಜನವರಿಯಲ್ಲಿ ದೆಹಲಿಗೆ ಕರೆಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ರಾಜ್ಯ ನಾಯಕರ ಮಾತನ್ನ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರನ್ನ ದೆಹಲಿಯಲ್ಲೆ ಒಟ್ಟಿಗೆ ಕೂರಿಸಿ ಸಭೆ ಮಾಡಲು ತೀರ್ಮಾನಿಸಿದೆ.ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಸಮ್ಮುಖದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ರಾಜ್ಯದಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರಲು ಒಗ್ಗಟ್ಟಾಗಿ ದುಡಿಯುವ ಮಾತನ್ನ ಹೈ ಕಮಾಂಡ್ ಮುಂದೆ ಹೇಳಬೇಕಿದೆ. ಆನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರ ಜಗಲ್ ಬಂದಿ ಶುರುವಾಗಲಿದೆ.
ಕೈ ನಾಯಕರ ಕಚ್ಚಾಟದಿಂದ ಕಂಗಾಲಾದ ಕಾಂಗ್ರೆಸ್ ಹೈಕಮಾಂಡ್ ಹೊಸ ನಾಯಕತ್ವದ ಜೊತೆಗೆ ಒಗ್ಗಟ್ಟಿನ ಮಂತ್ರ ಹೇಳಿಕೊಡಲು ಮುಂದಾಗಿದೆ. ಹೈಕಮಾಂಡ್ ನ ಜನವರಿ ಬೈಟಾಕ್ ಹಾಗೂ ಒಗ್ಗಟ್ಟಿನ ಪಾಠ ಸಿದ್ದರಾಮಯ್ಯ ಹಾಗೂ ಡಿಕೆಶಿಯನ್ನ ಒಟ್ಟು ಮಾಡುತ್ತ? ಅವರ ಒಗ್ಗಟ್ಟು ಕಾಂಗ್ರೆಸ್ ಅಧಿಕಾರ ಹಿಡಿಯಲು ನೆರವಾಗುತ್ತಾ ಅನ್ನೋದೆ ಸದ್ಯದ ಕುತೂಹಲ.