ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಡಿಕೆಶಿ ಶಿವಕುಮಾರ್ ಅವರು ಇಂದು ಬಳ್ಳಾರಿಯಲ್ಲಿ ಲೋಕಸಭೆ ಉಪಚುನಾವಣೆ ಹಿನ್ನೆಲೆ ಪ್ರಚಾರದ ವೇಳೆ ಗಾರ್ಮೆಂಟ್ಸ್ನಲ್ಲಿ ಪ್ಯಾಂಟ್ ಟ್ರಯಲ್ ನೋಡಿ ಶಾಪಿಂಗ್ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ಮೂರು ಜನ ಸೇರಿ ಜನರ ಬದುಕನ್ನೇ ನರಕ ಮಾಡಿದ್ದಾರೆ. ಗಾರ್ಮೆಂಟ್ಸ್ ನಲ್ಲಿ 40 ರೂ. 70 ರೂ.ಗಳಿಗೆಲ್ಲಾ ಕೆಲಸ ಮಾಡುತ್ತಿದ್ದಾರೆ. ಅದೇ ಜೀನ್ಸ್ ಪ್ಯಾಂಟ್ ಗಳನ್ನು ಬೆಂಗಳೂರಲ್ಲಿ 2-3 ಸಾವಿರಕ್ಕೆ ಮಾರುತ್ತಾರೆ. ಜನರ ಕಷ್ಟ ನೋಡಿದರೆ ನೋವಾಗುತ್ತದೆ. ನಾನು ಒಂದಷ್ಟು ಪ್ಯಾಂಟು ಶರ್ಟು ತಗೆದುಕೊಂಡು ಹೋಗುತ್ತೇನೆ ಬಟ್ಟೆ ಒಳ್ಳೆಯದಿದೆ ಎಂದು ಹೇಳಿದರು.
ಮಿಲ್ಲರ್ ಪೇಟೆಯ ಗಣೇಶ್ ಗುಡಿಯ ಗಾರ್ಮೆಂಟ್ಸ್ನಲ್ಲಿ ಪ್ಯಾಂಟ್ ಟ್ರಯಲ್ ನೋಡಿ ಆನಂತರ 5 ಜೀನ್ಸ್ ಪ್ಯಾಂಟ್ ಖರೀದಿಸಿ ಒಂದು ಪ್ಯಾಂಟ್ ಗೆ 500 ರೂ. ಒಟ್ಟು 2,500 ರೂ ಮೊತ್ತದ ಪ್ಯಾಂಟ್ ಅನ್ನು ಖರೀದಿಸಿದರು.
ಮನೆ ಮನೆ ಪ್ರಚಾರದ ಸಂದರ್ಭದಲ್ಲಿ ಡಿಕೆಶಿ ಅವರನ್ನು ಜನರು ಆರತಿ ಮಾಡಿ ಸ್ವಾಗತ ಮಾಡಿದ್ದರು. ಈ ವೆಳೆ ಆರತಿ ಮಾಡಿದ ಮಹಿಳೆಗೆ ಹಣವನ್ನು ನೀಡಿದರು. ಬಳಿಕ ಸೋಮಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಸೋಮಣ್ಣ ಅವರು ಹೇಳಿದಂತೆ ಶ್ರೀರಾಮುಲು ಮುಖ್ಯಮಂತ್ರಿಯಾಗಲಿ ಪ್ರಧಾನಿಯಾಗಲಿ. ಮೋದಿಯನ್ನು ಇಳಿಸಿ ಶ್ರೀರಾಮಲುವನ್ನು ಪ್ರಧಾನಿ ಮಾಡಲಿ. ಯಡಿಯೂರಪ್ಪ ಬದಲು ಶ್ರೀರಾಮುಲುವನ್ನು ಸಿಎಂ ಮಾಡಲಿ ಸಂತೋಷ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv