-ಯಡಿಯೂರಪ್ಪ ಧೋರಣೆ ಸರಿ ಇಲ್ಲ
ಬೆಂಗಳೂರು: ನನ್ನ ಪ್ರಾಣ ಹೋದರು ಮೆಡಿಕಲ್ ಕಾಲೇಜು ಬಿಟ್ಟು ಕೊಡಲ್ಲ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆಗಬೇಕೆಂದು ನಮ್ಮ ಸರ್ಕಾರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೀಗ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡುತ್ತಿರುವ ಸಿಎಂ ಯಡಿಯೂರಪ್ಪ ಧೋರಣೆ ಸರಿ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕಾಲೇಜು ಮಾಡೋದಕ್ಕೆ ನನ್ನ ವಿರೋಧವಿಲ್ಲ. ಆದರೆ ಕನಕಪುರ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡೋದು ತಪ್ಪು. ಕನಕಪುರ ಕಾಲೇಜಿಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದ್ದಾರೆ. ಯಡಿಯೂರಪ್ಪನವರು ಸಹ ಬಜೆಟ್ ನಲ್ಲಿ ಪ್ರಶ್ನೆ ಮಾಡದೇ ಕನಕಪುರ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅವಶ್ಯವಿದ್ದರೆ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ.
ಕನಕಪುರ ಕಾಲೇಜು ಸ್ಥಾಪನೆ ನನ್ನ ಡ್ರೀಮ್ ಪ್ರೊಜೆಕ್ಟ್. ಅಧಿಕಾರಕ್ಕೆ ಬಂದಾಗ ಎಲ್ಲವನ್ನು ಯಡಿಯೂರಪ್ಪ ಒಪ್ಪಿಕೊಂಡು ಕಾಮಗಾರಿಗೆಗೆ ಗುತ್ತಿಗೆ ನೀಡಲಾಗಿದೆ. ಈ ಹಿಂದೆ ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದವರು ಇದೀಗ ಕಾಲೇಜು ಅನುಮತಿಯನ್ನು ರದ್ದುಗೊಳಿಸಿದ್ದಾರೆ. ಕಾಲೇಜು ಸ್ಥಳಾಂತರ ವಿಚಾರವನ್ನು ಸಿಎಂ ಅವರಿಗೆ ಪತ್ರ ಬರೆದು ತಿಳಿಸುತ್ತೇನೆ. ಕನಕಕಪುರ ಜನಕ್ಕೆ ಮೆಡಿಕಲ್ ಕಾಲೇಜು ಭಾವನಾತ್ಮಕ ವಿಷಯವಾಗಿದೆ. ಈ ಎಲ್ಲ ಸೂಕ್ಷ್ಮಗಳನ್ನು ಪತ್ರದ ಮೂಲಕ ತಿಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಅನಾರೋಗ್ಯದಿಂದ ಸ್ವಲ್ಪ ಸುಸ್ತಾಗಿದೆ. ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಕನಕಪುರ ಕಾಲೇಜು ಸಂಬಂಧ ಸ್ಥಳೀಯ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತೇನೆ. ಕನಕಪುರ ಕಾಲೇಜಿಗಾಗಿ ಹೋರಾಟ ಮಾಡಲು ಸಹ ಸಿದ್ಧನಿದ್ದೇನೆ. ನಾವು ಅಧಿಕಾರದಲ್ಲಿದ್ದಾಗ ಯಡಿಯೂರಪ್ಪರು ನಮ್ಮ ಬಳಿ ಬಂದಾಗ ಗೌರವಯುತವಾಗಿ ಅನುದಾನ ಬಿಡುಗಡೆ ಮಾಡಿದ್ದೇವೆ. ಅಭಿವೃದ್ಧಿ ವಿಷಯದಲ್ಲಿ ನಾವು ಎಂದೂ ದ್ವೇಷ ರಾಜಕಾರಣ ಮಾಡಿಲ್ಲ ಎಂದು ಸಿಎಂಗೆ ಪರೋಕ್ಷವಾಗಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.