ರಾಯಚೂರು: ಎರಡು ದಿನಗಳಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಐವತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ಜನರ ಬೆಂಬಲದಿಂದ ಈ ಯಾತ್ರೆ ಮೂಲಕ ರಾಜ್ಯದಲ್ಲಿ 150 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.
ಎರಡನೇ ದಿನದ ಪಾದಯಾತ್ರೆ ಊಟದ ವಿರಾಮದ ವೇಳೆ ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು (BJP) ಏನ್ ಬೇಕಾದರೂ ಮಾತನಾಡುತ್ತಾರೆ. 3,570 ಕಿ.ಮೀ ನಡೆಯುವ ಧೈರ್ಯ ಯಾವ ನಾಯಕರು ಮಾಡುತ್ತಾರೆ. ಸ್ವಾತಂತ್ರ್ಯ ಹೋರಾಟ ಬೇರೆ ಈ ಹೋರಾಟವೇ ಬೇರೆ. ಖಂಡಿತ ಈ ಯಾತ್ರೆ ದೇಶದಲ್ಲಿ ಬದಲಾವಣೆಗೆ ಕಾರಣವಾಗುತ್ತೇ, ಈ ಹೆಜ್ಜೆ ಬದಲಾವಣೆ ಹೆಜ್ಜೆ. ರಾಹುಲ್ ಗಾಂಧಿ (Rahul Gandhi) ಪಡುತ್ತಿರುವ ಶ್ರಮ ತ್ಯಾಗವಾಗಿದೆ. ಪಕ್ಷದ ಅಧಿಕಾರ ಬೇಡ ಎಂದು ಜನರಿಗಾಗಿ ನಡೆಯುತ್ತಿದ್ದಾರೆ ಎಂದರು.
ರೈತ ಗೆದ್ದರೆ ದೇಶ ಗೆದ್ದಂಗೆ. ರೈತರ ಆದಾಯವನ್ನು ಸರ್ಕಾರ ಡಬಲ್ ಮಾಡುತ್ತೇವೆ ಎಂದು ಬಿಜೆಪಿ ಹೇಳಿತ್ತು ಆದರೆ ಮಾಡಲಿಲ್ಲ. ದೇಶದಲ್ಲಿ ಇದೀಗ ರೈತರು, ಬಡವರು ಬದುಕುವುದೇ ಕಷ್ಟವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 5 ವರ್ಷದಲ್ಲಿ 166 ಕ್ರಿಮಿನಲ್ಗಳ ಎನ್ಕೌಂಟರ್, 4453 ಮಂದಿಗೆ ಗಾಯ: ಯೋಗಿ ಆದಿತ್ಯನಾಥ್
ಪಾದಯಾತ್ರೆ ವೇಳೆ ನಾವು ಏನೇನೂ ಸಮಸ್ಯೆಗಳನ್ನ ಗಮನಿಸಿದ್ದೇವೋ ಅದನ್ನ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ಕೊಟ್ಟ ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ಅಧಿಕಾರ ಮಾಡುತ್ತಿದೆ. ಈ ಕೈ ಡ್ಯಾಂ ಕಟ್ಟಿದೆ, ಸ್ವಾತಂತ್ರ್ಯ ತಂದು ಕೊಟ್ಟಿದೆ, ಏನೆಲ್ಲಾ ಮಾಡಿದೆ ಎಂದ ಅವರು, ಬಿಜೆಪಿ ಹೈವೇ ಮಾಡಿದೆ ಅಷ್ಟೇ ಎಂದು ಟೀಕಿಸಿದರು.
ರಾಜ್ಯದಲ್ಲಿ ಐಕ್ಯತಾ ಯಾತ್ರೆ ನಾಳೆ ಬೆಳಿಗ್ಗೆ 11ಕ್ಕೆ ಮುಕ್ತಾಯವಾಗಲಿದೆ. ಯಾತ್ರೆಯಲ್ಲಿ ಇದುವರೆಗೆ ಲಕ್ಷಾಂತರ ಜನ ಭಾಗಿಯಾಗಿದ್ದಾರೆ. ರೈತರು, ಮಕ್ಕಳು, ಮಹಿಳೆಯರು, ಯುವಕರು ಪಕ್ಷ ನೋಡದೆ ಯಾತ್ರೆಯಲ್ಲಿ ಭಾಗವಹಿಸುತ್ತಿರುವುದನ್ನ ರಾಹುಲ್ ಗಾಂಧಿ ಗಮನಿಸಿದ್ದಾರೆ. ಪ್ರತಿಯೊಂದರ ಬೆಲೆ ಏರಿಕೆಯಿಂದ ಬದುಕಿನಲ್ಲಿ ಆಗುತ್ತಿರುವ ತೊಂದರೆ ನೋಡಿಕೊಂಡು ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಇಂದಿರಾಗಾಂಧಿಯವರನ್ನ ನೋಡಲು ಜನ ಹೇಗೆ ಬರುತ್ತಿದ್ದರೋ ಅದೇ ರೀತಿ ರಾಹುಲ್ ಗಾಂಧಿಯನ್ನ ನೋಡಲು ಬರುತ್ತಿದ್ದಾರೆ. ಈ ನಡಿಗೆ ದೇಶಕ್ಕೊಂದು ಕೊಡುಗೆ ಅಂತ ಜನ ಹೆಜ್ಜೆ ಹಾಕಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಈ ಬಾರಿ ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಕಾದು ನೋಡಿ: ಬೊಮ್ಮಾಯಿ