ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವರು, ಭಾನುವಾರ ಅಂದ್ರೆ ಜುಲೈ 28ರಂದು ಸಿದ್ಧಾರ್ಥ್ ಫೋನ್ ಮಾಡಿದ್ದರು. ಆಗ ನಿಮ್ಮನ್ನು ಆದಷ್ಟು ಬೇಗ ಭೇಟಿಯಾಗಬೇಕಿದೆ. ನನ್ನನ್ನು ಭೇಟಿಯಾಗುತ್ತೀರಾ ಅಂತ ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ.
However, I find this utterly fishy and urge that a thorough Investigation be conducted into this matter.
Shri Siddhartha and his family were closely known to me for decades now.
— DK Shivakumar (@DKShivakumar) July 30, 2019
ಈ ಸಂಬಂಧ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನನ್ನ ಜೊತೆಗೆ ಚೆನ್ನಾಗಿ ಮಾತನಾಡಿದ ಸಿದ್ಧಾರ್ಥ್ ಭೇಟಿಯಾಗಬೇಕು ಅಂತ ಕೇಳಿದ್ದರು. ಆದರೆ ನಾನು ರಾಜಕೀಯದಲ್ಲಿ ಸ್ವಲ್ಪ ಬ್ಯುಸಿ ಆಗಿದ್ದೇನೆ. ಎರಡು ದಿನ ಬಿಟ್ಟು ಭೇಟಿಯಾಗುತ್ತೇನೆ ಅಂತ ತಿಳಿಸಿದ್ದೆ. ಆದರೆ ಸಿದ್ಧಾರ್ಥ್ ಇಂತಹ ನಿರ್ಧಾರ ಕೈಗೊಳ್ಳುತ್ತಾರೆ ಅಂತ ನಾನು ಊಹೆ ಕೂಡ ಮಾಡಿಕೊಂಡಿರಲಿಲ್ಲ ಎಂದು ಹೇಳಿದರು.
ಐಟಿ ದಾಳಿಯಿಂದ ಹೀಗೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಿದ್ಧಾರ್ಥ್ ಅತ್ಯಂತ ಧೈರ್ಯಶಾಲಿ ವ್ಯಕ್ತಿ. ಸಾಲ ಮಾಡಿಕೊಂಡಿದ್ದಾರೆ ಅಂತ ಹೇಳಿದರೆ ಅವರಿಗೆ ಅದು ದೊಡ್ಡ ಹೊರೆಯಲ್ಲ. ಸಾಲಕ್ಕಿಂತ ಅವರ ಆಸ್ತಿಯೇ ಹೆಚ್ಚಿತ್ತು. ಅದನ್ನು ಚನ್ನಾಗಿ ನಿಭಾಯಿಸುವ ಸಾಮಥ್ರ್ಯ ಸಿದ್ಧಾರ್ಥ್ ಅವರಿಗೆ ಇತ್ತು ಎಂದು ಹೇಳಿದರು.
ಅವರಿಗೆ ಸಂಬಂಧಿಸಿದ ಅನೇಕ ವಿಚಾರಗಳು ನನಗೆ ಗೊತ್ತಿದೆ. ಆದರೆ ಅವುಗಳನ್ನು ಎದುರಿಸುವ ಶಕ್ತಿ ಅವರಿಗಿತ್ತು. ಸಿದ್ಧಾರ್ಥ್ ಅವರು ಅನೇಕ ಜನರಿಗೆ ಕೆಲಸ ಕೊಟ್ಟು, ಭಾರೀ ಎತ್ತರಕ್ಕೆ ಬೆಳೆದ ವ್ಯಕ್ತಿ. ಅವರು ರಾಜ್ಯಕ್ಕೆ ದೊಡ್ಡ ಕೀರ್ತಿ ತಂದಿದ್ದರು ಎಂದು ತಿಳಿಸಿದರು.
ಸಿದ್ಧಾರ್ಥ್ ಅವರನ್ನು ಯಾರಾದರು ಕರೆದುಕೊಂಡು ಹೋಗಿದ್ದಾರಾ? ಬೆದರಿಕೆ ಕರೆ ಬಂದಿತ್ತಾ? ಅವರನ್ನು ಯಾರಾದರೂ ಸೇತುವೆಯಿಂದ ನದಿಗೆ ತಳ್ಳಿದ್ದಾರಾ? ಅವರನ್ನು ಅಲ್ಲಿಗೆ ಕರೆಸಿಕೊಂಡು, ಅಲ್ಲಿಂದ ಅಪಹರಿಸಿದ್ದಾರಾ ಎಂಬ ಅನುಮಾನ ಎದ್ದಿದೆ. ಹೀಗಾಗಿ ತನಿಖೆ ನಡೆಯಬೇಕು ಅಂತ ಒತ್ತಾಯಿಸಿದ್ದೇನೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿಯಲ್ಲ ಎಂದು ಹೇಳಿದರು.
ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಡಿಕೆಶಿ ಈ ಪತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.