ಬೆಂಗಳೂರು: ಈ ಬಾರಿ ಉಪಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದ್ದರೂ ಹಾನಗಲ್ನಲ್ಲಿ ಪಕ್ಷದ ಸಾಧನೆ ಉತ್ತಮವಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆದ್ದಿಲ್ಲ ಗೆಲ್ಲುವ ಹಾದಿಯಲ್ಲಿದೆ. ಈಗಷ್ಟೇ ನಾನು ಶ್ರೀನಿವಾಸ ಮಾನೆ ಅವರ ಹತ್ತಿರ ಮಾತನಾಡಿದೆ. ಈ ಚುನಾವಣೆಯ ಫಲಿತಾಂಶವನ್ನು ನಾನು ವಿಶ್ಲೇಷಣೆ ಮಾಡಬೇಕಿಲ್ಲ. ಮಾನೆಯವರು ಹಿಂದೆ 6 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಸರ್ಕಾರ, ಸಿಎಂ, ಅಭಿವೃದ್ಧಿ ಕಾರ್ಯ ಎಲ್ಲ ಬಿಜೆಪಿ ಅವರ ಪರವಾಗಿತ್ತು. ನಮ್ಮ ಫ್ರೆಂಡ್ಸ್ ಎಲ್ಲಾ ಬ್ಯಾಗ್ ಎಲ್ಲಾ ತೆಗೆದುಕೊಂಡು ಹೋಗಿ ಎಲ್ಲಾ ತರ ಕೆಲಸ ಮಾಡಿದ್ದರು. ಆದರೂ ಮಾನೆ ಇದೀಗ 13 ಸಾವಿರ ವೋಟ್ಗಳಿಂದ ಮುಂದಿದ್ದಾರೆ ಎಂದು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಹಾನಗಲ್ನಲ್ಲಿ ಕಾಂಗ್ರೆಸ್ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ
ಕಳೆದ ಚುನಾವಣೆಯಲ್ಲಿ ಸಿಂದಗಿಯಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿತ್ತು. ಅಶೋಕ್ ಮನಗೊಳಿ ಅವರ ಪಕ್ಷದಿಂದ ನಿಲ್ಲುತ್ತೇವೆ ಅಂದಿದ್ದರೆ ನಮ್ಮದೇನು ಇರಲಿಲ್ಲ. ಅವರು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುತ್ತೇನೆ ಎಂದರು ನಾವು ಟಿಕೆಟ್ ನೀಡಿದೆವು. ಈ ಬಾರಿ ಸೋತರೂ ಪಕ್ಷದ ಸಾಧನೆ ಉತ್ತಮವಾಗಿದೆ. ಒಳ್ಳೆಯ ಬೆಳವಣಿಗೆ. ಒಟ್ಟಾರೆ ಎರಡೂ ಕ್ಷೇತ್ರದಲ್ಲಿನ ಬದಲಾವಣೆಯನ್ನು ನೋಡಿದರೆ ಜನ ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಒಂದು ಬಿಜೆಪಿ ಒಂದು ಜೆಡಿಎಸ್ ಸೀಟ್ ಇತ್ತು ಈಗ ಅದರಲ್ಲಿ ನಮಗೆ ಒಂದು ಸೀಟ್ ಬಂದಿದೆ.
ಮತದಾರರು ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದು ಕೊರೊನಾ ವಿಚಾರವಾಗಿ ಮಾತ್ರವಲ್ಲ. ಸಂಪೂರ್ಣ ಆಡಳಿತ ವ್ಯವಸ್ಥೆಯಿಂದಾಗಿ ಈ ಪರಿಸ್ಥಿತಿ ಬಂದಿದೆ. ಇದು ಇಡೀ ದೇಶಕ್ಕೆ ಒಂದು ಸಂದೇಶವಾಗಿದೆ ಎಂದು ನುಡಿದರು. ಇದನ್ನೂ ಓದಿ: ಹಾನಗಲ್ ಉಪ ಚುನಾವಣೆ: ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ